ಉಡುಪಿ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಮಹಾಸಭೆ
ಉಡುಪಿ, ಅ.12: ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಉಡುಪಿ ಜಾಮಿಯಾ ಮಸೀದಿಯ ಸಭಾಭವನದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಅಕ್ಬರ್ ಅಲಿ ಮಾತನಾಡಿ, 37 ವರ್ಷಗಳಿಂದ ಬಡ್ಡಿ ರಹಿತ ಸಾಲ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಈ ಸೊಸೈಟಿಯು ಈಗ ನೋಂದಣಿಯಾಗಿದೆ. ಇದರಲ್ಲಿ ಹೆಚ್ಚೆಚ್ಚು ಠೇವಣಿಗಳು ಹರಿದು ಬಂದಲ್ಲಿ ಹೆಚ್ಚಿನ ಮೊತ್ತದ ಸಾಲ ನೀಡಲು ಸಹಕಾರಿಯಾಗುತ್ತದೆ. ಬಡ್ಡಿಯೆಂಬ ಕೆಟ್ಟ ವ್ಯವಸ್ಥೆಯ ವಿರುದ್ಧ ಪ್ರತಿರೋಧವಲ್ಲದಿದ್ದರೂ ಚಿಮಣಿ ದೀಪವನ್ನಾದರೂ ಉರಿಸುವ ಪ್ರಯತ್ನ ನಮ್ಮದು. ಕೇವಲ ಲಾಭದಲ್ಲಿ ತೂಗಿ ನೋಡುವ ಇಂದಿನ ಸಮಾಜ ದಲ್ಲಿ ಬಡ್ಡಿ ರಹಿತ ಸೇವೆಯನ್ನು ನೀಡುವುದೇ ಒಂದು ದೊಡ್ಡ ಸಾಧನೆಯಾಗಿದೆ ಎಂದರು.
ಮುಖ್ಯ ಸಲಹೆಗಾರ ನರಸಿಂಹಸ್ವಾಮಿ, ಉಪಾಧ್ಯಕ್ಷ ಸಲಾಹುದ್ದೀನ್ ಸಾಹೆಬ್ ಉಪಸ್ಥಿತರಿದ್ದರು. ವೌಲಾನ ದಾನಿಶ್ ಕಿರಾತ್ ಪಠಿಸಿದರು. ನಿಸಾರ್ ಅಹ್ಮದ್ ಮಹಾಸಭೆಯ ಸೂಚನಾ ಪತ್ರವನ್ನು ವಾಚಿಸಿದರು. ಕಾರ್ಯದರ್ಶಿ ಮುಹಮ್ಮದ್ ಆರಿಫ್ ವರದಿಯನ್ನು ಓದಿದರು.
ಸೊಸೈಟಿಯ ನಿರ್ದೇಶಕ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಯು.ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.