‘ಮೀಟೂ’ ಅಭಿಯಾನದ ಬಿಸಿ: ತನ್ನ ಹಿರಿಯ ಅಧಿಕಾರಿಗೆ ರಜೆ ನೀಡಿದ ಟಾಟಾ ಮೋಟರ್ಸ್
ಮುಂಬೈ,ಅ.12: ಬಾಲಿವುಡ್ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಸದ್ದು ಮಾಡಿದ ‘ಮೀಟೂ’ ಅಭಿಯಾನದ ಬಿಸಿ ಈಗ ಕಾರ್ಪೊರೇಟ್ ಕ್ಷೇತ್ರಕ್ಕೂ ತಾಗಿದೆ. ಮಹಿಳಾ ಉದ್ಯೋಗಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಟಾಟಾ ಮೋಟರ್ಸ್ ತನ್ನ ಕಾರ್ಪೊರೇಟ್ ಸಂವಹನ ವಿಭಾಗದ ಮುಖ್ಯಸ್ಥ ಸುರೇಶ ರಂಗರಾಜನ್ ಅವರನ್ನು ರಜೆಯಲ್ಲಿ ಕಳುಹಿಸಿದೆ.
ಆದಷ್ಟು ಶೀಘ್ರದಲ್ಲಿ ವಸ್ತುನಿಷ್ಠ ವಿಚಾರಣೆ ಮುಗಿಯುವಂತಾಗಲು ರಂಗರಾಜನ್ ಅವರಿಗೆ ರಜೆಯಲ್ಲಿ ತೆರಳುವಂತೆ ಸೂಚಿಸಲಾಗಿದೆ ಎಂದು ಟಾಟಾ ಮೋಟರ್ಸ್ ಟ್ವಿಟರ್ ಪೋಸ್ಟ್ನಲ್ಲಿ ತಿಳಿಸಿದೆ.
ಗುರುವಾರ ಪತ್ರಕರ್ತೆಯೋರ್ವರು ರಂಗರಾಜನ್ ವಿರುದ್ಧದ ಆರೋಪಗಳ ಸ್ಕ್ರೀನ್ ಶಾಟ್ಗಳನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಟಾಟಾ ಮೋಟರ್ಸ್ ತನ್ನ ಉದ್ಯೋಗಿಗಳಿಗೆ ಕೆಲಸದ ಸ್ಥಳಗಳಲ್ಲಿ ಗೌರವ ಮತ್ತು ಸುರಕ್ಷತೆ ಇರುವಂತೆ ನೋಡಿಕೊಳ್ಳುತ್ತ ಬಂದಿದೆ. ಯಾವುದೇ ಆರೋಪ ಕೇಳಿ ಬಂದರೂ ತಕ್ಷಣವೇ ತನಿಖೆಯನ್ನು ನಡೆಸಲಾಗುತ್ತದೆ ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಕಾನೂನಿನ್ವಯ ರಚಿತ ಆಂತರಿಕ ಸಮಿತಿಯೊಂದು ಈ ಆರೋಪದ ಕುರಿತು ತನಿಖೆ ನಡೆಸುತ್ತಿದೆ ಎಂದೂ ಸಂಸ್ಥೆಯು ತಿಳಿಸಿದೆ.