ಆಕಾಶವಾಣಿಯ ನೇರಪ್ರಸಾರದಲ್ಲಿ ವೀಕ್ಷಕ ವಿವರಣೆ
ಮಂಗಳೂರು-ಕೊಲ್ಲೂರು ದಸರಾ-ಮಹಾನವಮಿ
ಮಂಗಳೂರು, ಅ.12: ಮಂಗಳೂರು ಆಕಾಶವಾಣಿ ಕೇಂದ್ರವು ದಸರಾ ಹಾಗೂ ಮಹಾನವಮಿ ಉತ್ಸವದ ನೇರಪ್ರಸಾರ ಮಾಡಲು ಮಂಗಳೂರು ಹಾಗೂ ಕೊಲ್ಲೂರಿನಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಮಂಗಳೂರು ದಸರಾ ವೈಭವದ, ಮುಖ್ಯಮಂತ್ರಿಗಳ ಭೇಟಿ ಮತ್ತು ಶೋಭಾಯಾತ್ರೆಯ ಹಾಗೂ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಹಾನವಮಿ ರಥೋತ್ಸವ ವಿಜಯದಶಮಿಯ ನೇರಪ್ರಸಾರದ ವೀಕ್ಷಕ ವರಣೆ ಬಿತ್ತರವಾಗಲಿದೆ.
ಅ.14ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2018ರ ಕಾರ್ಯಕ್ರಮವನ್ನು ಶ್ರೀಕ್ಷೇತ್ರದ ಸಂತೋಷಿ ಕಲಾ ಮಂಟಪದಿಂದ ಸಂಜೆ 5:30ಕ್ಕೆ ನೇರ ಪ್ರಸಾರ ಮಾಡಲಾಗುವುದು. ಅ.19ರಂದು ನಡೆಯುವ ಬೃಹತ್ ಮಂಗಳೂರು ದಸರಾ ಮೆರವಣಿಗೆಯ ವೀಕ್ಷಕ ವಿವರಣೆಯನ್ನು ಕೂಡ ಸಂಜೆ 5:30ಕ್ಕೆ ಪ್ರಸಾರ ಮಾಡಲಾಗುವುದು.
ಕೊಲ್ಲೂರು ಶ್ರಿಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುವ ಮಹಾನವಮಿ, ರಥೋತ್ಸವ ಹಾಗೂ ವಿಜಯದಶಮಿ ಕಾರ್ಯಕ್ರಮಗಳನ್ನು ಅ.18 ಮತ್ತು 19ರಂದು ನೇರ ಪ್ರಸಾರ ಮಾಡಲಾಗುವುದು. ಅ.18 ರಂದು ಬೆಳಗ್ಗೆ 9 ಗಂಟೆಯಿಂದ ಚಂಡಿಕಾ ಹೋಮ ಹಾಗೂ ರಥೋತ್ಸವ ಹಾಗೂ ಅ.19ರಂದು ಬೆಳಗ್ಗೆ 8:30ರಿಂದ ವಿಜಯದಶಮಿ ದಿನ ನವಾನ್ನಪ್ರಾಶನದ ಹಾಗೂ ವಿದ್ಯಾರಂಭ ಕುರಿತು ವೀಕ್ಷಕ ವಿವರಣೆ ಮೂಡಿಬರಲಿದೆ.
ಆಕಾಶವಾಣಿ ನಿಲಯದ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿಯ ನೇತೃತ್ವದಲ್ಲಿ ಕಾರ್ಯಕ್ರಮ ಅಧಿಕಾರಿಗಳ ವೀಕ್ಷಕ ವಿವರಣೆಕಾರರ ತಂಡ ರಚಿಸಲಾಗಿದೆ. ಈ ದಸರಾ-ಮಹಾನವಮಿಯ ನೇರ ಪ್ರಸಾರವನ್ನು ಎಫ್ಎಂ 100.3 ಹಾಗೂ 1089 ಕಿಲೋಹರ್ಟ್ಸ್ನಲ್ಲಿ ಆಲಿಸುವಂತೆ ನಿಲಯದ ಪ್ರಕಟನೆ ಕೋರಿದೆ.