‘ಕಾರಂತರು ಅನುಭವ ಸಿದ್ಧ ಸಾಹಿತಿ’: ಡಾ. ಪ್ರಭಾಕರ ಶಿಶಿಲ
ಮಂಗಳೂರು, ಅ.12: ಜೀವನಾಧ್ಯಯನವೇ ಕಾರಂತರ ಸಾಹಿತ್ಯದ ಸತ್ವವಾಗಿದೆ. ಡಾ. ಶಿವರಾಮ ಕಾರಂತರು ಅನುಭವ ಸಿದ್ಧ ಸಾಹಿತ್ಯವನ್ನು ರಚಿಸಿದವರು. ಇದು ಸಾಹಿತ್ಯಾಸಕ್ತರಿಗೆ ಪ್ರಿಯವಾಯಿತು. ಆದುದರಿಂದಲೇ ಕಾರಂತರು 20ನೇ ಶತಮಾನದ ಜಗತ್ತಿನ ಶ್ರೇಷ್ಠ ಸಾಹಿತಿ ಯಾಗಿದ್ದಾರೆ ಎಂದು ಡಾ. ಪ್ರಭಾಕರ ಶಿಶಿಲ ಹೇಳಿದರು.
ನಗರದ ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇದರ ಕನ್ನಡ ಸಂಘ ಆಯೋಜಿಸಿದ್ದ ‘ಕಾರಂತ ಜನುಮ ದಿನ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಶಿವರಾಮ ಕಾರಂತರು ಸಾಂಸ್ಕೃತಿಕ ಜ್ಞಾನದೊಡನೆ ವಿಜ್ಞಾನ ಬೆರೆತ ವಿಚಾರ ಸಾಹಿತ್ಯವನ್ನು ನೀಡಿದರು. ಪರಿಸರವಾದಿಯಾಗಿದ್ದ ಕಾರಂತರು ವಿಜ್ಞಾನ ಹಾಗೂ ಸಮಾಜ ವಿಜ್ಞಾನವು ಸಮಾನವಾಗಿರಬೇಕು ಎಂದು ಪ್ರತಿಪಾದಿಸಿದರು. ಹಾಗಾಗಿ ಸತ್ಯದರ್ಶನಕ್ಕಾಗಿ ಕಾರಂತರ ಓದು ಅತ್ಯಗತ್ಯ ಎಂದು ಡಾ.ಪ್ರಭಾಕರ ಶಿಶಿಲ ನುಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ ಪಿ., ಡಾ. ನಾಗಪ್ಪಗೌಡ, ಡಾ. ನಾಗವೇಣಿ ಮಂಚಿ, ಪ್ರೊ.ಶೇಷಪ್ಪ, ಡಾ. ಜಯಶ್ರೀ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಪ್ರಾಧ್ಯಾಪಕ ಪ್ರೊ. ರವಿಕುಮಾರ ಎಂ.ಪಿ ವಂದಿಸಿದರು.ವಿದ್ಯಾರ್ಥಿನಿಯ ರೂಪಾಶ್ರೀ ಮತ್ತು ಸುಪ್ರಿಯಾ ಆಶಯ ಗೀತೆ ಹಾಡಿದರು. ವಿದ್ಯಾರ್ಥಿನಿ ಕಾವೇರಿ ಶಿವಾಜಿ ಆನೆಗುದ್ದಿ ಕಾರ್ಯಕ್ರಮ ನಿರೂಪಿಸಿದರು.