ಮುಂಬೈ ಕೇಂದ್ರ ರೈಲು ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಿ: ಕೇಂದ್ರ ಸಚಿವ ಅಠಾವಳೆ
ಮುಂಬೈ,ಅ.12: ಮುಂಬೈ ಕೇಂದ್ರ ರೈಲು ನಿಲ್ದಾಣಕ್ಕೆ ದಲಿತ ನಾಯಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನಿಡುವಂತೆ ಕೇಂದ್ರ ಸಚಿವ ರಾಮದಾಸ ಅಠಾವಳೆ ಶುಕ್ರವಾರ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಲು ತಾನು ಶೀಘ್ರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಠಾವಳೆ ತಿಳಿಸಿದ್ದಾರೆ. ಅಂಬೇಡ್ಕರ್ ಅವರು ಮುಂಬೈಯಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದರು ಮತ್ತು ಇಲ್ಲಿಯೇ ಅನೇಕ ಸಾಮಾಜಿಕ ಚಳುವಳಿಗಳಿಗೆ ರೂಪ ನೀಡಿದ್ದರು. ಹಾಗಾಗಿ ಮುಂಬೈ ಕೇಂದ್ರ ರೈಲು ನಿಲ್ದಾಣಕ್ಕೆ ಅವರ ಹೆಸರನ್ನಿಡುವುದು ಅತ್ಯಂತ ಸೂಕ್ತವಗಿದೆ ಎಂದು ಅಠಾವಳೆ ತಿಳಿಸಿದ್ದಾರೆ. ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಕ್ಟೋರಿಯ ಟರ್ಮಿನಸ್ಗೆ ಚತ್ರಪತಿ ಶಿವಾಜಿ ಹೆಸರಿಡುವುದನ್ನು ದಲಿತರು ಸ್ವಾಗತಿಸಿದ್ದರು. ಮುಂಬೈ ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಟ್ಟರೆ ನಮಗೆ ಬಹಳ ಸಂತೋಷವಾಗುತ್ತದೆ ಎಂದು ಅಠಾವಳೆ ತಿಳಿಸಿದ್ದಾರೆ.