ರಂಗಭೂಮಿಯಿಂದ ಬಲವಂತದ ಹೇರಿಕೆ ತಡೆಯಲು ಸಾಧ್ಯ: ನಾಗೇಶ್ ಕುಮಾರ್
ಮುದ್ರಾಡಿ: ಅಖಿಲ ಭಾರತ ನವರಂಗೋತ್ಸವಕ್ಕೆ ಚಾಲನೆ
ಹೆಬ್ರಿ, ಅ.12: ನಾವು ಹೇಗೆ ಇರಬೇಕು, ಯಾವ ರೀತಿಯ ಬಟ್ಟೆ ತೊಡ ಬೇಕು, ಯಾವ ಆಹಾರ ತಿನ್ನಬೇಕು ಎಂಬುದನ್ನು ಯಾರೋ ಕೆಲವರು ನಿರ್ಧರಿ ಸುವ ಕಾಲ ಬಂದಿದೆ. ಈ ರೀತಿಯ ಬಲವಂತದ ಹೇರಿಕೆಯನ್ನು ದೂರ ಮಾಡುವ ಶಕ್ತಿ ರಂಗಭೂಮಿಗೆ ಇದೆ ಎಂದು ಹಿರಿಯ ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಹೇಳಿದ್ದಾರೆ.
ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ನಾಟ್ಕ ಇದರ ವತಿಯಿಂದ ಮುದ್ರಾಡಿಯಲ್ಲಿ ಒಂಭತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ 18ನೆ ವರ್ಷದ ಅಖಿಲ ಭಾರತ ನವರಂಗೋತ್ಸವಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ನಮ್ಮದು ಇಂದು ಸಂವೇದನಾಹೀನ ಬದುಕು ಆಗುತ್ತಿದೆ. ಸಾಹಿತ್ಯ ಮತ್ತು ನಾಟಕಕ್ಕೆ ರಾಕ್ಷಸರನ್ನೂ ಕೂಡ ಬಂಧುವಾಗಿಸುವ ಶಕ್ತಿ ಇದೆ. ಮುಂದಿನ ದಿನ ಗಳಲ್ಲಿ ರಂಗಭೂಮಿಯಿಂದಲೇ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ರಂಗಭೂಮಿಯಿಂದ ಮನಸ್ಸಿಗೆ ಸಂತೋಷ ದೊರೆಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತ ನಾಡಿ, ರಂಗಭೂಮಿಗೆ ಭವಿಷ್ಯ ಇದೆ. ನಾಟಕದ ಬದುಕಿನಲ್ಲಿ ಯಾರಿಗೂ ಅಪಾಯವಿಲ್ಲ, ಉತ್ತಮ ಗುಣ ಇರುವುದರಿಂದ ಮಾತ್ರ ರಂಗಸೇವೆ ನಿರಂತರ ಮಾಡಲು ಸಾಧ್ಯ ಎಂದು ಹೇಳಿದರು.
ಕೋಟಿ ಚೆನ್ನಯ ಧಾರವಾಹಿಯ ನಿರ್ಮಾಪಕ ಅಶೋಕ ಸುವರ್ಣ ಕಟಪಾಡಿ, ಸಮಾಜ ಸೇವಕ ಮುಲ್ಕಿ ಕೇಶವ ರಾವ್ ಸಾಂಗ್ಲಿ, ಎಲ್ಐಸಿಯ ಅಭಿವೃದ್ಧಿ ಅಧಿಕಾರಿ ಕಾರ್ಕಳದ ಕಿಶೋರ ಕುಮಾರ್ ಶೆಟ್ಟಿ, ಸಂಘಟಕ ಸಂಕ ಬೈಲು ಮಂಜುನಾಥ ಅಡಪ, ಕಲಾವಿದರಾದ ದಿನಕರ ಹೇರೂರು, ಜಯ ಕೆ.ಶೆಟ್ಟಿ ಅವರಿಗೆ ‘ಕರ್ನಾಟಕ ನಾಡ ಪೋಷಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಕ್ಷೇತ್ರದ ಧರ್ಮದರ್ಶಿ ಧರ್ಮಯೋಗಿ ಮೋಹನ್, ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕ ದತ್ತಾತ್ರೇಯ ಮಾರ್ಪಳ್ಳಿ, ರಾಜೇಶ ಆಳ್ವ ಬದಿಯಡ್ಕ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ವಾಣಿ ಸುಕುಮಾರ್, ಸುಧೀಂದ್ರ ಮೋಹನ್, ಉಮೇಶ ಕಲ್ಮಾಡಿ, ಸುಗಂಧಿ ಉಮೇಶ ಕಲ್ಮಾಡಿ ಉಪಸ್ಥಿತರಿದ್ದರು.
ಬಳಿಕ ಕಾರ್ಕಳ ಭುವನೇಂದ್ರ ಕಾಲೇಜಿನ ಭುವನರಂಗ ತಂಡದಿಂದ ಚಂದ್ರ ನಾಥ ಬಜಗೋಳಿ ರಚಿಸಿದ ಸುಕುಮಾರ ಮೋಹನ್ ನಿರ್ದೇಶನದ ‘ಬಲಿಕಂಬ’ ನಾಟಕದ ಪ್ರದರ್ಶನ ನಡೆಯಿತು.