ರಫೇಲ್ ಡೀಲ್ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ರಕ್ಷಣಾ ಹಗರಣ: ಪ್ರಶಾಂತ್ ಭೂಷಣ್
ಹೊಸದಿಲ್ಲಿ, ಅ.13: ರಫೇಲ್ ಡೀಲ್ ‘ದೇಶ ಕಂಡ ಅತೀ ದೊಡ್ಡ ರಕ್ಷಣಾ ಹಗರಣ’ ಎಂದು ಪ್ರಸಿದ್ಧ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದು, ತಾನು ಹಾಗು ಇತರರು ನೀಡಿರುವ ದೂರನ್ನು ಸಿಬಿಐ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಂಬಿರುವುದಾಗಿ ತಿಳಿಸಿದರು.
ಮುಂಬೈ ಪ್ರೆಸ್ ಕ್ಲಬ್ ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಈ ಬಗ್ಗೆ ಮುಂದಡಿಯಿಡಲು, ಪ್ರಾಥಮಿಕ ವಿಚಾರಣೆ ಅಥವಾ ಎಫ್ ಐಆರ್ ದಾಖಲಿಸಲು ಸಿಬಿಐ ವಿಫಲವಾದಲ್ಲಿ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ಯಲಾಗುವುದು ಎಂದವರು ಹೇಳಿದರು.
ರಫೇಲ್ ಡೀಲ್ ಗೆ ಮತ್ತು ಬೋಫೋರ್ಸ್ ಹಗರಣಕ್ಕೆ ಸಾಮ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿರ್ದಿಷ್ಟ ಕಂಪೆನಿಯೊಂದಕ್ಕೆ ಲಾಭ ಮಾಡಿಕೊಟ್ಟ ಬೋಫೋರ್ಸ್ ನಂತಲ್ಲ ರಫೇಲ್ ಡೀಲ್. ಇದು ದೇಶ ಕಂಡ ಅತೀ ದೊಡ್ಡ ರಕ್ಷಣಾ ಹಗರಣ” ಎಂದವರು ಆರೋಪಿಸಿದರು.
ಮೋದಿ ನೇತೃತ್ವದ ಕೇಂದ್ರ ಸರಕಾರ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ರಫೇಲ್ ಡೀಲ್ ಮೂಲಕ ಲಾಭ ಮಾಡಿಕೊಟ್ಟಿದೆ, ರಫೇಲ್ ಡೀಲ್ ನಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ ಎಂದು ವಿಪಕ್ಷಗಳು ಆರೋಪಿಸುತ್ತಲೇ ಬಂದಿವೆ.