ನಿರ್ಬಂಧ ವಿಧಿಸಿದಲ್ಲಿ ಸೂಕ್ತ ಪ್ರತ್ಯುತ್ತರ: ಸೌದಿ ಎಚ್ಚರಿಕೆ
ಪತ್ರಕರ್ತ ಜಮಾಲ್ ನಾಪತ್ತೆ ಪ್ರಕರಣ
ದುಬೈ,ಅ.13: ಪತ್ರಕರ್ತ ಜಮಾಲ್ ಖಶೋಗಿ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಿದಲ್ಲಿ ಅದಕ್ಕೆ ತಾನು ಸೂಕ್ತ ಪ್ರತೀಕಾರ ಕೈಗೊಳ್ಳುವುದಾಗಿ ಸೌದಿ ಅರೇಬಿಯ ರವಿವಾರ ಎಚ್ಚರಿಕೆ ನೀಡಿದೆ. ಖಶೋಗಿ ಇಸ್ತಾಂಬುಲ್ನಲ್ಲಿರುವ ಸೌದಿ ರಾಯಭಾರಿ ಕಚೇರಿಯಲ್ಲಿ ಹತ್ಯೆಯಾಗಿದ್ದಾರೆಂಬ ವದಂತಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲೇ ರಿಯಾದ್ನ ಶೇರು ಮಾರುಕಟ್ಟೆ ಕಳೆದ ಕೆಲವು ವರ್ಷಗಳಲ್ಲೇ ದಯನೀಯ ಕುಸಿತವನ್ನು ಕಂಡಿದೆ.
ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದು ಅಥವಾ ರಾಜಕೀಯ ಒತ್ತಡವನ್ನು ಹೇರುವ ಮೂಲಕ ಸೌದಿಯನ್ನು ಕೆಳಕ್ಕೆ ತಳ್ಳುವಂತಹ ಯಾವುದೇ ರೀತಿಯ ಪ್ರಯತ್ನಗಳನ್ನು ಸೌದಿ ಸಾಮ್ರಾಜ್ಯವು ದೃಢವಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ತಿರಸ್ಕರಿಸಲಿದೆ’’ ಎಂದು ರಿಯಾದ್ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ವಿಶ್ವದ ಅರ್ಥಿಕತೆಯಲ್ಲಿ ಸೌದಿ ಅತ್ಯಂತ ಪರಿಣಾಮಕಾರಿ ಹಾಗೂ ಮಹತ್ವದ ಪಾತ್ರವನ್ನು ವಹಿಸುತ್ತಿದ್ದು, ಎಂದು ತಿಳಿಸಿರುವ ಹೇಳಿಕೆಯು, ಸಾಮ್ರಾಜ್ಯದ ವಿರುದ್ಧ ಕೈಗೊಳ್ಳುವ ಯಾವುದೇ ನಿರ್ಬಂಧಗಳಿಗೆ ದೊಡ್ಡ ರೀತಿಯಲ್ಲಿ ಪ್ರತೀಕಾರ ಎಸಗುವುದಾಗಿ ಅದು ಹೇಳಿದೆ.