ಚಿಕ್ಕಮಗಳೂರು: ಎಸ್ಪಿ ಅಣ್ಣಾಮಲೈ ವರ್ಗಾವಣೆ; ನೂತನ ಎಸ್ಪಿಯಾಗಿ ಹರೀಶ್ ಪಾಂಡೆ ನೇಮಕ
ಕೆ. ಅಣ್ಣಾಮಲೈ, ಹರೀಶ್ ಪಾಂಡೆ
ಚಿಕ್ಕಮಗಳೂರು, ಅ.16: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರೀಶ್ ಪಾಂಡೆ ಅವರನ್ನು ರಾಜ್ಯ ಸರಕಾರ ನಿಯೋಜಿಸಿದ್ದು, ಸದ್ಯ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗಕ್ಕೆ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಹರೀಶ್ ಪಾಂಡೆ ಅವರು ಈ ಹಿಂದೆ ಸಿಐಡಿ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.ಎಸ್ಐಟಿ ಅಧಿಕಾರಿಯಾಗಿ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರೆಂದು ತಿಳಿದು ಬಂದಿದೆ.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ವರ್ಗಾವಣೆಯಾಗಲಿದ್ದಾರೆ ಎಂಬ ಮಾತು ಕಳೆದ ಅನೇಕ ದಿನಗಳಿಂದ ಕೇಳಿ ಬರುತ್ತಿತ್ತು. ವಿಧಾನಸಭೆ ಚುನಾವಣೆ ನಂತರ ಸರಕಾರ ರಚನೆ ಸರ್ಕಸ್ಸ್ನಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಎಸ್ಪಿ ಕೆ.ಅಣ್ಣಾಮಲೈ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ನಂತರ ನಡೆದ ರಾಜಕೀಯ ಬೆಳವಣಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಎಚ್.ಡಿ.ಕುಮಾರಸ್ವಾಮಿ ಅಲಂಕರಿಸುತ್ತಿದ್ದಂತೆ ಮತ್ತೆ ಅಣ್ಣಾಮಲೈ ಚಿಕ್ಕಮಗಳೂರಿನ ಎಸ್ಪಿಯಾಗಿ ಪುನಃ ನಿಯುಕ್ತಿಗೊಂಡಿದ್ದರು.
ಕೆ.ಅಣ್ಣಾ ಮಲೈ ಅವರನ್ನು ರಾಜ್ಯ ಸರಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.