ಸ್ಥಳೀಯ ಸಂಸ್ಥೆಗಳು ತೃತೀಯ ಲಿಂಗತ್ವದವರಿಗೆ ಸರ್ಕಾರಿ ಯೋಜನೆಗಳನ್ನು ವಿಸ್ತರಿಸಲಿ : ಅಶ್ವಿನ್ ರಾಜನ್
ಕೋಲಾರ,ಅ.16 : ಸಲಿಂಗಕಾಮ, ಅಸ್ವಭಾವಿಕ ಅಪರಾಧ ಹಾಗೂ ಅನೈತಿಕ ಲೈಂಗಿಕತೆ ಬಗ್ಗೆ ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯ ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 377ಕ್ಕೆ ತಿದ್ದುಪಡಿ ತಂದು ವಿವಾಹ ವಯೋಮಿತಿ ದಾಟಿದ ಯಾವುದೇ ಇಬ್ಬರು ಮನುಷ್ಯರ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿರುವುದನ್ನು ಸಂಗಮ ಹಾಗೂ ಸಮ್ಮಿಲನ ಸಂಸ್ಥೆಯವರು ಕೇಕ್ ಕತ್ತರಿಸುವ ಮೂಲಕ ಸ್ವಾಗತಿಸಿ ವಿಜಯೋತ್ಸವ ಆಚರಿಸಿದ್ದಾರೆ.
ಕೋಲಾರದ ಪತ್ರಕರ್ತ ಭವನದಲ್ಲಿ ಕೇಕ್ ಕತ್ತರಿಸಿ ವಿಜಯೋತ್ಸವ ಆಚರಣೆ ಮಾಡುವ ಮೂಲಕ ಸುಪ್ರೀಂಕೋರ್ಟ್ ತೀರ್ಪುನ್ನು ಸ್ವಾಗತಿಸಿದರು. ನಂತರ ಸುದ್ಧಿಗೋಷ್ಠಿ ನಡೆಸಿದ ಸಂಸ್ಥೆಯ ಮುಖಂಡರು ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಬಹಳಷ್ಟು ಅಧಿಕಾರಿಗಳಿಗೆ ಮಾಹಿತಿಯ ಕೊರತೆ ಇದೆ. ಸರ್ಕಾರದ ಹಲವಾರು ಯೋಜನೆಗಳಲ್ಲಿ ತೃತೀಯ ಲಿಂಗದ ಜನರನ್ನು ಆಯ್ಕೆ ಮಾಡುತ್ತಿಲ್ಲ, ತೃತೀಯ ಲಿಂಗತ್ವ ಹೊಂದಿದ ಯಾವುದೇ ವ್ಯಕ್ತಿ ತನ್ನನ್ನು ಹೆಣ್ಣು ಅಥವಾ ಗಂಡು ಎಂದು ಘೋಷಿಸಿಕೊಂಡಲ್ಲಿ ಅವರಿಗೆ ಅದೇ ಲಿಂಗತ್ವದ ಆಧಾರದಲ್ಲಿ ಸರ್ಕಾರಿ ಯೋಜನೆಗಳನ್ನು ಒದಗಿಸಬೇಕು,
ಸರ್ಕಾರ ನೀಡುವ ಸ್ವಯಂ ಉದ್ಯೋಗ ಯೋಜನೆಗಳಿಗೆ ಆಯ್ಕೆ ಮಾಡುವಾಗ ತೃತೀಯ ಲಿಂಗತ್ವದ ಫಲಾನುಭವಿಗಳಿಗೆ ಒಂದು ಲಕ್ಷದ ವರೆಗಿನ ಸಾಲ ಸೌಲಭ್ಯವನ್ನು ಯಾವುದೇ ಶೂರಿಟಿ ಇಲ್ಲದೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀಡುವ ಸಣ್ಣ ವ್ಯಾಪಾರಿಗಳ ಪರವಾನಗಿಗಳು ಹಾಗೂ ಇನ್ನಿತರೆ ಮಳಿಗೆಗಳು ನೀಡುವಾಗ ತೃತೀಯ ಲಿಂಗತ್ವದ ಜನರಿಗೆ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ತೃತೀಯ ಲಿಂಗತ್ವದ ಜನರಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಕೊರತೆ ನೀಗಿಸಲು ಅವರಿಗೆ ತರಬೇತಿಯನ್ನು ನೀಡಬೇಕು. ಎಂಬಿತ್ಯಾಧಿ ಬೇಡಿಕೆಗಳಿಗೆ ಸ್ಪಂಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ಮಹೇಶ್ ಪಾಟೀಲ್, ಸಂಗಮ ಸಂಸ್ಥೆಯ ಅಶ್ವಿನ್ ರಾಜನ್, ಸಮ್ಮಿಲನ ಸಂಸ್ಥೆಯ ರಾಧಿಕಾ, ಕೃಷ್ಣಮೂರ್ತಿ ಭಾಗವಹಿಸಿದ್ದರು.