ಎಚ್1 ಎನ್1 ಸೋಂಕು: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
ದ.ಕ.ಜಿಲ್ಲೆಯಲ್ಲಿ 29 ಪ್ರಕರಣ ಪತ್ತೆ
ತಜ್ಞ ವೈದ್ಯರ ತಂಡದ ವರದಿಯ ಬಳಿಕ ನಾಲ್ಕು ಮರಣ ಪ್ರಕರಣಗಳ ಅಧಿಕೃತ ಘೋಷಣೆ
ಮಂಗಳೂರು, ಅ.17: ದ.ಕ.ಜಿಲ್ಲೆಯಲ್ಲಿ ಈವರೆಗೆ ಎಚ್1 ಎನ್1 ಸೋಂಕಿಗೆ ಸಂಬಂಧಿಸಿದಂತೆ 359 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿ ಸಲಾಗಿದೆ. ಆ ಪೈಕಿ 29 ಮಂದಿಯಲ್ಲಿ ಎಚ್1 ಎನ್1 ರೋಗದ ಅಂಶ ಬೆಳಕಿಗೆ ಬಂದಿದೆ. ಶಂಕಿತ ನಾಲ್ಕು ಮರಣ ಪ್ರಕರಣದ ಬಗ್ಗೆ ಸರಕಾರದ ನಿಯಮಾ ವಳಿಯಂತೆ ತಜ್ಞ ವೈದ್ಯರ ತಂಡದ ವರದಿಯ ಬಳಿಕ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ. ರಾಮಕೃಷ್ಣರಾವ್ ತಿಳಿಸಿದರು.
ಬುಧವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ವರ್ಷದ ಜನವರಿಯಿಂದ ಆಗಸ್ಟ್ವರೆಗೆ 3, ಸೆಪ್ಟಂಬರ್ನಲ್ಲಿ 12 ಹಾಗೂ ಅಕ್ಟೋಬರ್ 15ರವರೆಗೆ 14 ಪ್ರಕರಣ ಸಹಿತ ಒಟ್ಟು 29 ಪ್ರಕರಣ ಬೆಳಕಿಗೆ ಬಂದಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ 260, ಬಂಟ್ವಾಳದಲ್ಲಿ 37, ಪುತ್ತೂರಿನಲ್ಲಿ 22, ಬೆಳ್ತಂಗಡಿಯಲ್ಲಿ 34, ಸುಳ್ಯದಲ್ಲಿ 6 ಮಂದಿಯ ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಆ ಪೈಕಿ ಮಂಗಳೂರಿನಲ್ಲಿ ಅತ್ಯಧಿಕ ಅಂದರೆ 26, ಬಂಟ್ವಾಳದಲ್ಲಿ 2, ಪುತ್ತೂರಿನಲ್ಲಿ 1 ಮಂದಿಯಲ್ಲಿ ಎಚ್1 ಎನ್1 ಸೋಂಕು ಕಂಡು ಬಂದಿದೆ. ಪುತ್ತೂರು, ಸುಳ್ಯದಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಸೋಂಕು ಕಾಣಿಸಿಕೊಂಡವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 23 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ತಜ್ಞ ವೈದ್ಯರ ತಂಡದಿಂದ ಪರಿಶೀಲನೆ
ಸಜಿಪನಡುವಿನ ಅವ್ವಮ್ಮ, ಮಗಳು ಜಬೀನಾ ಹಾಗೂ ಮಲ್ಲೂರಿನ ಅಬ್ದುಲ್ಲಾ, ಉಳ್ಳಾಲ ಹಳೆಕೋಟೆಯ ಜಮೀಲಾ ಮೃತಪಟ್ಟಿರುವುದು ಎಚ್1ಎನ್1 ಸೋಂಕಿನಿಂದಲೋ ಅಥವಾ ಬೇರೆ ಕಾರಣದಿಂದಲೋ ಎಂಬುದರ ಬಗ್ಗೆ ತಜ್ಞ ವೈದ್ಯರ ತಂಡವು ದಾಖಲೆಗಳನ್ನು ಪರಿಶೀಲನೆ ಮಾಡಲಿದೆ. ಸರಕಾರಿ ನಿಯಮದ ಪ್ರಕಾರ ಸಾಂಕ್ರಾಮಿಕ ರೋಗಗಳಿಗೆ ತುತ್ತಾದ ಬಗ್ಗೆ ಏಕಾಏಕಿ ಘೋಷಣೆ ಮಾಡುವಂತಿಲ್ಲ. ಅದಕ್ಕೆ ತಜ್ಞ ವೈದ್ಯರ ವರದಿಯ ಆಧಾರದ ಮೇಲೆ ಅಧಿಕೃತ ಘೋಷಣೆ ಮಾಡಬೇಕಾಗುತ್ತದೆ. ಆ ಕೆಲಸವನ್ನು ಇದೀಗ ಆರೋಗ್ಯ ಇಲಾಖೆಯು ಮಾಡುತ್ತಲಿದೆ. ಅವ್ವಮ್ಮರ ಪತಿ ಮಯ್ಯದ್ದಿ ಮತ್ತು ಜಬೀನಾರ ನವಜಾತ ಶಿಶು ಎಚ್1 ಎನ್1 ಸೋಂಕಿನಿಂದ ಮೃತಪಟ್ಟ ಬಗ್ಗೆ ವೈದ್ಯಕೀಯ ದಾಖಲೆಗಳಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಡಾ. ಎಂ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಲು ಸೂಚನೆ
ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಮೈಕೈ ನೋವು, ಚಳಿ ಮತ್ತು ಸುಸ್ತು ಇತ್ಯಾದಿ ಎಚ್1 ಎನ್1 ಸೋಂಕಿನ ಲಕ್ಷಣಗಳಾಗಿವೆ. ಕೆಲವರಲ್ಲಿ ಅತಿಸಾರ ಬೇಧಿ, ವಾಂತಿಯೂ ಇರಲಿದೆ. ಸಾಮಾನ್ಯವಾಗಿ ರೋಗಿಗಳು ಕೆಮ್ಮಿದಾಗ ಅಥವಾ ಸೀನಿದಾಗ ಈ ವೈರಸ್ ಹರಡುತ್ತದೆ. ಹಾಗಾಗಿ ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು, ಜನನಿಬಿಡ ಪ್ರದೇಶದಿಂದ ದೂರವಿರಬೇಕು, ಹಸ್ತಲಾಘವ ಮಾಡಬಾರದು, ತಬ್ಬಿಕೊಳ್ಳಬಾರದು, ಚುಂಬಿಸಲೂ ಬಾರದು, ಕಣ್ಣು, ಮೂಗು, ಬಾಯಿಯನ್ನು ಆಗಾಗ ಕೈಯಿಂದ ಮುಟ್ಟಲೂ ಬಾರದು ಎಂದು ಡಾ. ರಾಮಕೃಷ್ಣ ರಾವ್ ಸೂಚಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ನವೀನ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.