ತ್ರಿವಳಿ ತಲಾಕ್ ನಿಷೇಧವಾದಾಗ ಚಪ್ಪಾಳೆ ತಟ್ಟಿದವರಿಂದ ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ವಿರೋಧವೇಕೆ ?
ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ,ಅ.17: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಪ್ರಬಲವಾಗಿ ಬೆಂಬಲಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸುವುದು ತಪ್ಪು ಎಂದು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಒಂದು ನಿರ್ಧಾರ ಮಾಡಿದೆ. ಆದರೆ ಈಗ ನೀವು ಇದು ನಿಮ್ಮ ಸಂಪ್ರದಾಯ ಎಂದು ಹೇಳುತ್ತಿದ್ದೀರಿ. ತ್ರಿವಳಿ ತಲಾಕ್ ಕೂಡಾ ಒಂದು ಸಂಪ್ರದಾಯವಾಗಿತ್ತು. ಅದನ್ನು ನಿಷೇಧಿಸಿದಾಗ ಎಲ್ಲರೂ ಚಪ್ಪಾಳೆ ತಟ್ಟಿದ್ದರು. ಅದೇ ಹಿಂದೂಗಳು ಈಗ ಬೀದಿಗಿಳಿದಿದ್ದಾರೆ. ಇದು ಹಿಂದೂ ಪುನರುತ್ಥಾನ ಮತ್ತು ಗೊಡ್ಡುತನದ ನಡುವಿನ ಯುದ್ಧ. ಎಲ್ಲ ಹಿಂದೂಗಳೂ ಸಮಾನರು ಮತ್ತು ಜಾತಿ ಪದ್ಧತಿಯನ್ನು ತೊಡೆದು ಹಾಕಬೇಕೆಂದು ಪುನರುತ್ಥಾನ ಹೇಳುತ್ತದೆ. ಯಾಕೆಂದರೆ ಬ್ರಾಹ್ಮಣರು ಇಂದು ಕೇವಲ ವಿದ್ವಾಂಸರಾಗಿ ಉಳಿದಿಲ್ಲ. ಅವರು ಸಿನೆಮಾ ಮತ್ತು ವ್ಯವಹಾರಗಳಲ್ಲೂ ಇದ್ದಾರೆ . ಜಾತಿಯು ಜನ್ಮದಿಂದ ಬರುತ್ತದೆ ಎಂದು ಹೇಳಿದವರು ಯಾರು? ಶಾಸ್ತ್ರಗಳನ್ನೂ ತಿದ್ದುಪಡಿ ಮಾಡಬಹುದು ಎಂದು ಸ್ವಾಮಿ ತಿಳಿಸಿದ್ದಾರೆ.
ಸಂವಿಧಾನದಲ್ಲಿ ಪ್ರಾರ್ಥನೆ ಒಂದು ಮೂಲಭೂತ ಹಕ್ಕು ಎಂದು ಹೇಳಲಾಗಿದೆ. ಹಾಗಾಗಿ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶವನ್ನು ನೀಡಿದ್ದು ಈಗ ಅದನ್ನು ಅನುಷ್ಠಾನಕ್ಕೆ ತರುವ ಹೊಣೆ ರಾಜ್ಯ ಸರಕಾರದ ಮೇಲಿದೆ. ಹೀಗೆ ಮಾಡುವಲ್ಲಿ ರಾಜ್ಯ ಸರಕಾರ ಅಸಮರ್ಥವಾಗಿದ್ದರೆ ಅದು ಕೇಂದ್ರದ ನೆರವನ್ನು ಕೇಳಲಿ ಎಂದು ಸ್ವಾಮಿ ಆಗ್ರಹಿಸಿದ್ದಾರೆ.