ರಾಜ್ಯ ಸರಕಾರದ ಖಜಾನೆಗೆ ದಾರಿದ್ರ್ಯ ಬಂದಿಲ್ಲ: ಸಿಎಂ ಕುಮಾರಸ್ವಾಮಿ
ಮಡಿಕೇರಿ, ಅ.17: ತಾಯಿ ಕಾವೇರಿ ಹಾಗೂ ಚಾಮುಂಡಿಯ ಆಶೀರ್ವಾದದಿಂದ ಈ ರಾಜ್ಯದಲ್ಲಿರುವ ಜನರ ಖಜಾನೆಗೆ ದಾರಿದ್ರ್ಯ ಬಂದಿಲ್ಲ. ಸರ್ಕಾರದ ಖಜಾನೆ ಶ್ರೀಮಂತವಾಗಿರಲು ಅಧಿಕಾರಿಗಳ ಸಹಕಾರವೆ ಕಾರಣವೆಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಶ್ಲಾಘಿಸಿದರು.
ಮಳೆಹಾನಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಯಾವುದೇ ಹಣದ ಕೊರತೆ ಇಲ್ಲ ಮತ್ತು ರೈತರ ಸಾಲ ಮನ್ನಾಗೆ ಆರ್ಥಿಕ ಅಡಚಣೆ ಇಲ್ಲವೆಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಸರ್ಕಾರ ಈಗಾಗಲೆ ಪರಿಹಾರ ಕಾರ್ಯಕ್ಕಾಗಿ 122 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಭೂ ಕುಸಿತದಿಂದ ಉಂಟಾಗಿರುವ ಪ್ರದೇಶವನ್ನು ಪರಿಶೀಲಿಸಿ ಯಾವ ಬೆಳೆಯನ್ನು ಬೆಳೆಯಲು ಸಾಧ್ಯ ಎನ್ನುವ ಬಗ್ಗೆ ಹೆಚ್ಚುವರಿ ಅಧಿಕಾರಿಗಳ ಮೂಲಕ ಮಾಹಿತಿಯನ್ನು ಪಡೆಯಲಾಗುವುದು. 800 ನಿರಾಶ್ರಿತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
ಮುಂದಿನ ಮಳೆಗಾಲದಲ್ಲಿ ಮತ್ತೆ ಯಾವುದೇ ಅನಾಹುತ ಸಂಭವಿಸದಂತೆ ಶಾಶ್ವತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Next Story