ಬೈಕ್ಗೆ ಕಾರು ಢಿಕ್ಕಿ: ಸವಾರನಿಗೆ ಗಂಭೀರ ಗಾಯ
ಮಂಗಳೂರು, ಅ.17: ಬೈಕ್ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮರೋಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಪಡೀಲ್ ನಿವಾಸಿ ಜ್ಞಾನೇಶ್ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ನಂತೂರು- ಬಿಕರ್ನಕಟ್ಟೆ ಮೂಲಕ ಪಡೀಲ್ನ ತನ್ನ ಮನೆ ಕಡೆಗೆ ಜ್ಞಾನೇಶ್ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದರು. ಮರೋಳಿಯ ವೀನು ಎಂಟರ್ಪ್ರೈಸಸ್ ಬಳಿ ತಲುಪುತ್ತಿದ್ದಂತೆ ರಾತ್ರಿ ಸುಮಾರು 11:45ಕ್ಕೆ ಕಾರನ್ನು ಚಲಾಯಿಸಿಕೊಂಡು ಬಂದ ಬೈಜು ಮಾವಿಲ ಎಂಬಾತ ನಿಯಂತ್ರಣ ತಪ್ಪಿ ತೆರೆದ ಡಿವೈಡರ್ ಬಳಿ ಒಮ್ಮೆಲೇ ಬಲಕ್ಕೆ ತಿರುಗಿಸಿದ್ದಾರೆ.
ಈ ವೇಳೆ ಜ್ಞಾನೇಶ್ ಚಲಾಯಿಸುತ್ತಿದ್ದ ಬೈಕ್ಗೆ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಮೇತ ಜ್ಞಾನೇಶ್ ಡಾಮಾರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಅದೇ ರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾವೊಂದರಲ್ಲಿ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಂಗಳೂರು ನಗರ ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.