'ಕೇಂದ್ರ ಮಾಹಿತಿ ಆಯೋಗದ ಸ್ವಾತಂತ್ರ್ಯದ ವಿಚಾರದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಕೇಂದ್ರ ಸರಕಾರ'
ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಆರೋಪ
ಶ್ರೀಧರ್ ಆಚಾರ್ಯುಲು
ಪುಣೆ, ಅ. 18: ಭಾರತದ ಮುಖ್ಯ ಮಾಹಿತಿ ಆಯುಕ್ತರಾದ ಪ್ರೊ. ಶ್ರೀಧರ್ ಆಚಾರ್ಯುಲು ಅವರು ಆರ್ ಟಿ ಐ ಕಾಯಿದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳಿಗೆ ತಮ್ಮ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿಗಳನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರವು ಕೇಂದ್ರ ಮಾಹಿತಿ ಆಯೋಗದ ಸ್ವಾತಂತ್ರ್ಯದ ವಿಚಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯ ಮಾಹಿತಿ ಆಯುಕ್ತರು, ರಾಜ್ಯದ ಮುಖ್ಯ ಮಾಹಿತಿ ಆಯುಕ್ತರುಗಳ ಹಾಗೂ ಇತರ ಮಾಹಿತಿ ಆಯುಕ್ತರುಗಳ ಅಧಿಕಾರಾವಧಿ, ವೇತನ, ಸಂಭಾವನೆ, ಸೇವೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಕೇಂದ್ರ ಸೂಚಿಸುವಂತಾಗಲು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.
ಮನಿಲೈಫ್ ಫೌಂಡೇಶನ್ ಮತ್ತು ಪುಣೆ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ''ಆರ್ ಟಿ ಐ ಮೂಲಕ ಪ್ರಜಾಸತ್ತೆಯ ಸಬಲೀಕರಣ ಮತ್ತು ಪಾರದರ್ಶಕತೆ'' ವಿಚಾರದಲ್ಲಿ ಮಾತನಾಡಿದ ಆಚಾರ್ಯುಲು, ''ಕೇಂದ್ರ ಪ್ರಸ್ತಾಪಿಸಿದ ತಿದ್ದುಪಡಿಗಳು ಆಯೋಗದ ಅಧಿಕಾರವನ್ನೇ ಮೊಟಕುಗೊಳಿಸುತ್ತದೆ. ಕೇಂದ್ರ ಮಾಹಿತಿ ಆಯೋಗದ ಅಂತಸ್ತು ಮತ್ತು ಅಧಿಕಾರವನ್ನು ಕಡಿಮೆಗೊಳಿಸುವ ಉದ್ದೇಶ ಅದು ಹೊಂದಿದೆ'' ಎಂದರು.
''ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯು ಕಾರ್ಯದರ್ಶಿಯ ಹುದ್ದೆಗಿಂತ ಕೆಳಗಿದ್ದರೆ, ಆರ್ ಟಿ ಐ ಅನ್ವಯ ಕೇಳಿದ ಮಾಹಿತಿ ನೀಡುವಂತೆ ಅವರು ಆದೇಶ ನೀಡುವಂತಿಲ್ಲ, ಆರ್ ಟಿ ಐ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರಕ್ಕೆ ಅಧಿಕಾರವಿಲ್ಲ'' ಎಂದು ಅವರು ಹೇಳಿದರು.
ರಫೇಲ್ ಒಪ್ಪಂದದ ನಿರ್ಧಾರವನ್ನು ಹೇಗೆ ಕೈಗೊಳ್ಳಲಾಯಿತು ಎಂಬ ಮಾಹಿತಿಯೊದಗಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಗೆ ಆಕ್ಷೇಪ ಸೂಚಿಸಿದ ಆಚಾರ್ಯುಲು, ಮಾಹಿತಿಯನ್ನು ನೀಡುವುದು ಉತ್ತಮ ಆಡಳಿತದ ಸಂಕೇತ ಆದರೆ ಸರಕಾರಕ್ಕೆ ಮಾಹಿತಿ ನೀಡಲು ಮನಸ್ಸೇ ಇಲ್ಲದಿರುವಾಗ ಅದು ಮಾಹಿತಿಯೊದಗಿಸದೇ ಇರಲು ನೆಪಗಳನ್ನು ಹುಡುಕಬಹುದು ಎಂದರು.