ಹನೂರು: ಅವೈಜ್ಞಾನಿಕ ಚರಂಡಿ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹನೂರು,ಅ.19: ಪಟ್ಟಣದ 10ನೇ ವಾರ್ಡ್ನ ಜಿ.ವಿ ಗೌಡ ಕಾಲೇಜು ಸಮೀಪ ನಿರ್ಮಾಣವಾಗುತ್ತಿರುವ ಚರಂಡಿ ಕಾಮಾಗಾರಿ ಅವೈಜ್ಞಾನಿಕವಾಗಿದ್ದು, ಕಲುಷಿತ ನೀರು ಒಂದೆಡೆ ನಿಂತು ಅನೈರ್ಮಲ್ಯದ ವಾತಾವಾರಣ ನಿರ್ಮಾಣವಾಗಿದೆ. ಈ ಸಂಬಂಧ ಹಲವಾರು ಬಾರಿ ದೂರು ನೀಡಿದರೂ ಪಪಂ ಆಡಳಿತ ಮಂಡಳಿ ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಆಳಲು ತೋಡಿಕೊಂಡಿದ್ದಾರೆ.
ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಕಳೆದ 3 ತಿಂಗಳ ಹಿಂದೆ ಮುಖ್ಯಮಂತ್ರಿ ನಗರೋತ್ಪಾನ 3ನೇ ಹಂತದ ಯೋಜನೆಯಡಿ ಚರಂಡಿ ಕಾಮಗಾರಿಯನ್ನು ಪ್ರಾರಂಬಿಸಿದ್ದು, ಅರ್ಧಕ್ಕೆ ನಿಂತಿರುವ ಪರಿಣಾಮ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ನೀರು ಸಂಗ್ರಹವಾಗಿ ಪಾಚಿ ಕಟ್ಟಿದೆ. ಕೊಳಚೆ ನೀರು ಮುಂದೆ ಸಾಗದಿರುವುದರಿಂದ ನೀರಿನ ಜೊತೆ ತಾಜ್ಯ ವಸ್ತುಗಳು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸೊಳ್ಳೆಗಳ ಕಾಟದಿಂದ ದಿನ ನಿತ್ಯ ಯಾತನೆ ಅನುಭವಿಸಬೇಕಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಅಲ್ಲದೇ, ಇಲ್ಲಿನ ಸಮೀಪದ ಬಡಾವಣೆಗೆ ತೆರಳಲು ಸ್ಲಾಬ್ಅನ್ನು ಸಹ ನಿರ್ಮಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳು ಸುಮಾರು 1 ಕಿಮೀ ಸುತ್ತಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಅವ್ಯವಸ್ಥೆಯ ಚರಂಡಿ ಕುರಿತು ಈ ವಾರ್ಡ್ನ ಸದಸ್ಯರು ಹಾಗೂ ಪಪಂ ಅಧಿಕಾರಿಗಳ ಗಮನಕ್ಕೂ ತಂದರೂ ಕಾಮಗಾರಿಗಳನ್ನು ಪೂರ್ಣಗೂಳಿಸಲು ಮೀನಮೇಷ ಎಣಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೂಟ್ಟಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.