ದಾಂಧಲೆ ಆರೋಪ: ಮಹಿಳೆಯರಿಬ್ಬರು ಸೇರಿ ಏಳು ಜನರ ಬಂಧನ
ಬೆಂಗಳೂರು, ಅ.20: ಅಪಾರ್ಟ್ಮೆಂಟ್ವೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ ಆರೋಪದಡಿ ಮಹಿಳೆಯರಿಬ್ಬರು ಸೇರಿ ಏಳು ಜನರನ್ನು ಇಲ್ಲಿನ ಕಾಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮುನಿಸ್ವಾಮಿ, ಶ್ರೀನಿವಾಸ್ ಗೌಡ, ಓಂ ಪ್ರಕಾಶ್, ಅನಿಲ್, ವಿನೋದ್, ಶಶಿಕಲಾ ಹಾಗೂ ಹೇಮಾವತಿ ಬಂಧಿತರಾಗಿದ್ದು, ಇವರೆಲ್ಲಾ ಚನ್ನಸಂದ್ರದ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಕಾಡುಗೋಡಿಯ ಚೆನ್ನಸಂದ್ರ ಇಶಾ ಮಿಸ್ಟಿನ್ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ದಸರಾ ದುರ್ಗಾ ಪೂಜೆ ಮಾಡುತ್ತಿದ್ದ ವೇಳೆ, ಚನ್ನಸಂದ್ರದ ಕೆಲ ನಿವಾಸಿಗಳು ಅಪಾರ್ಟ್ಮೆಂಟ್ ಆವರಣಕ್ಕೆ ನುಗ್ಗಿ ಅಲ್ಲಿನ ಜನರ ಮೇಲೆ ಹಲ್ಲೆ ನಡೆಸಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ಬೇಸತ್ತು ಅಪಾರ್ಟ್ಮೆಂಟ್ ವಾಸಿಗಳು ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.
ಸುಮಾರು 15 ಕ್ಕೂ ಹೆಚ್ಚು ಜನ ಸೇರಿ ಗಲಾಟೆ ಮಾಡಿ ಅಪಾರ್ಟ್ಮೆಂಟ್ ಮುಖ್ಯ ದ್ವಾರ ಮುರಿದು ಹಾಕಿ ಅಕ್ರಮವಾಗಿ ಒಳಗೆ ನುಗ್ಗಿ ಅಲ್ಲಿನ ನಿವಾಸಿಗಳ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಆರೋಪಿಗಳನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.