ಮರಳು ಸಮಸ್ಯೆ: ಟಿಪ್ಪರ್ ಮಾಲಕರ ಮುಂದುವರೆದ ಮುಷ್ಕರ
ಕುಂದಾಪುರ, ಅ.20: ಜಿಲ್ಲೆಯ ಮರಳು ಸಮಸ್ಯೆಯನ್ನು ಬಗೆಹರಿಸದ ಜಿಲ್ಲಾಡಳಿತದ ವಿರುದ್ಧ ಕುಂದಾಪುರ, ಕೋಟೇಶ್ವರ ಹಾಗೂ ಹೆಮ್ಮಾಡಿಯಲ್ಲಿ ಕುಂದಾಪುರ ತಾಲೂಕು ಟಿಪ್ಪರ್ ಮಾಲಕರ ಸಂಘದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೆ ದಿನಾದ ಶನಿವಾರವೂ ಮುಂದುವರಿ ದಿದೆ.
ಅ.18ರಂದು ಕುಂದಾಪುರ, ಕೋಟೇಶ್ವರ, ಹೆಮ್ಮಾಡಿ ಸಹಿತ ವಿವಿಧೆಡೆಗಳಲ್ಲಿ ಟಿಪ್ಪರ್ ಮಾಲಕರು ತಮ್ಮ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಹೆದ್ದಾರಿ ಬದಿ ನಿಲ್ಲಿಸಿ, ಮುಷ್ಕರ ಆರಂಭಿಸಿದ್ದರು. ಮರಳುಗಾರಿಕೆಗೆ ಅನುಮತಿ ನೀಡುವ ವರೆಗೆ ಮುಷ್ಕರ ಕೈ ಬಿಡುವುದಿಲ್ಲ. ಇದಕ್ಕೂ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಹೆಮ್ಮಾಡಿಯಲ್ಲಿ ನಡೆಯುತ್ತಿರುವ ಟಿಪ್ಪರ್ ಮಾಲಕರ ಸಂಘದ ಅನಿರ್ದಿಷ್ಟಾ ವಧಿ ಮುಷ್ಕರ ಸ್ಥಳಕ್ಕೆ ಬೈಂದೂರು ಶಾಸಕರು ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ನೀಡಿ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಶಿವಮೊಗ್ಗ ಲೋಕಸಭಾ ಉಪಚುನಾವಣೆ ಮುಗಿದ ಬಳಿಕ ಮರಳು ಸಮಸ್ಯೆಗೆ ತಾರ್ಕಿಕ ಅಂತ್ಯವಾಡಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.