ಬೆಂಗಳೂರು: ರಸ್ತೆ ಅಪಘಾತಕ್ಕೆ ವೈದ್ಯ ಬಲಿ
ಬೆಂಗಳೂರು, ಅ.21: ಬೈಕ್ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೊಲೀಸ್ ಚೌಕಿಗೆ ಢಿಕ್ಕಿ ಹೊಡೆದ ಪರಿಣಾಮ ರೇಡಿಯಾಲಜಿಸ್ಟ್ ವೈದ್ಯ ಸಾವನ್ನಪ್ಪಿರುವ ಘಟನೆ ಹೈಗ್ರೌಂಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಶರಣ್(25) ಮೃತಪಟ್ಟ ರೇಡಿಯಾಲಜಿಸ್ಟ್ ವೈದ್ಯ ಎಂದು ಪೊಲೀಸರು ಗುರುತಿಸಿದ್ದಾರೆ.
ಹೆಬ್ಬಾಳದಲ್ಲಿ ವಾಸವಾಗಿದ್ದ ಶರಣ್, ನಗರದ ಪ್ರಮುಖ ಆಸ್ಪತ್ರೆಯೊಂದರಲ್ಲಿ ರೇಡಿಯಾಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರವಿವಾರ ಮುಂಜಾನೆ ಸ್ನೇಹಿತನನ್ನು ಬೈಕ್ನಲ್ಲಿ ಕೂರಿಸಿಕೊಂಡು ಶರಣ್ ಹೋಗುತ್ತಿದ್ದರು. ಹೈಗ್ರೌಂಡ್ಸ್ ಸಂಚಾರಿ ಠಾಣೆ ವ್ಯಾಪ್ತಿಯ ವಿಂಡ್ಸರ್ ಮ್ಯಾನರ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೊಲೀಸ್ ಚೌಕಿ (ಪೊಲೀಸ್ ಐಲ್ಯಾಂಡ್)ಗೆ ಅಪ್ಪಳಿಸಿದೆ. ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶರಣ್ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹಿಂಬದಿ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಹೈಗ್ರೌಂಡ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.