ವಾಮಾಚಾರಕ್ಕೆ 9 ವರ್ಷದ ಬಾಲಕನ ಬಲಿ
ತಿತಲಗಢ (ಒರಿಸ್ಸಾ), ಅ. 21: ಬೋಲಂಗಿರಿ ಜಿಲ್ಲೆಯ ಸಿಂಧೇಕೇಲ ಪ್ರದೇಶದ ಸಮೀಪದ ನದಿ ದಂಡೆಯಲ್ಲಿ ಪತ್ತೆಯಾದ 9 ವರ್ಷದ ಬಾಲಕನ ರುಂಡವಿಲ್ಲದ ಮೃತದೇಹದ ನಿಗೂಢತೆ ಭೇದಿಸುವಲ್ಲಿ ಒರಿಸ್ಸಾ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ರುಂಡವಿಲ್ಲದ ಮುಂಡ ಸಿಂಧೇಕೇಲ ಗ್ರಾಮದ ಘನಶ್ಯಾಮ್ ರಾಣಾನದ್ದೆಂದು ಗುರುತಿಸಲಾಗಿದೆ. ಈತನ ಮಾವ, ಮಾಂತ್ರಿಕ ಕುಂಜ ರಾಣಾ ಹಾಗೂ ವಾಮಾಚಾರದಲ್ಲಿ ನಂಬಿಕೆ ಉಳ್ಳ ಸಹೋದರ ಸಂಬಂಧಿ ಸುಭಾಬಾನ್ ರಾಣಾ ಘನಶ್ಯಾಮ್ನನ್ನು ಮಾಂತ್ರಿಕ ಉದ್ದೇಶಕ್ಕೆ ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರೂ ಬಾಲಕನನ್ನು ಬಳಸಿಕೊಂಡು ವಾಮಾಚಾರ ನಡೆಸಿದ್ದಾರೆ. ಇದರ ಒಂದು ಭಾಗವಾಗಿ ದುರ್ಗಾ ಪೂಜೆಯ ಸಂದರ್ಭ ದುರ್ಗಾ ದೇವತೆಯ ಸಂತೃಪ್ತಿಗಾಗಿ ಬಾಲಕನನ್ನು ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಅಕ್ಟೋಬರ್ 13ರಂದು ನಾಪತ್ತೆಯಾಗಿದ್ದ. ಮೂರು ದಿನಗಳ ಬಳಿಕ ಬಾಲಕನ ರುಂಡ ರಹಿತ ಮುಂಡ ಸುಂಧಿಮುಂಡ ಗ್ರಾಮದ ಮನೆಯಿಂದ 5 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು.