ಪತ್ನಿಯನ್ನು ಕೊಂದು ಮೃತದೇಹದ ಮುಂದೆ 24 ಗಂಟೆ ಕುಳಿತ!
ಮಗುವನ್ನೂ ಜೊತೆಗಿರಿಸಿದ್ದ ವ್ಯಕ್ತಿ
ಹೊಸದಿಲ್ಲಿ, ಅ.22: ರಾಜಧಾನಿಯ ಕಾಲೇಜೊಂದರಲ್ಲಿ ಅಟೆಂಡರ್ ಆಗಿರುವ 24 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಸಾಯಿಸಿ, ಎರಡು ವರ್ಷದ ಪುತ್ರಿಯ ಜೊತೆ ಪತ್ನಿಯ ಕಳೇಬರದ ಎದುರು 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದು ಅಂತಿಮವಾಗಿ ರವಿವಾರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಪತ್ನಿಯನ್ನು ಕೊಲೆಗೈದಿದ್ದೇನೆ ಎಂದು ಹೇಳಿದಾಗ ಮೊದಲು ನಂಬದ ಪೊಲೀಸರು ಆತನ ಜತೆ ಕಮಲಾ ಮಾರ್ಕೆಟ್ ನ ಶಾಕಿರ್ ಕಿ ದಂಡಿ ಪ್ರದೇಶದಲ್ಲಿರುವ ಆತನ ಮನೆಗೆ ತೆರಳಿದ್ದರು. ಅಲ್ಲಿ ನೆಲದಲ್ಲಿ ಹಾಸಿದ ಚಾಪೆಯಲ್ಲಿ ಆತನ ಪತ್ನಿ ರೇಷ್ಮಾ ಶವವಾಗಿ ಪತ್ತೆಯಾಗಿದ್ದಳಲ್ಲದೆ ಕೊರಳಲ್ಲಿ ಕತ್ತು ಹಿಸುಕಿ ಸಾಯಿಸಿದ ಗುರುತು ಇತ್ತು.
ಆರೋಪಿ ಪತಿಯನ್ನು ಕಾಮಿಲ್ ಎಂದು ಗುರುತಿಸಲಾಗಿದೆ. ವರದಕ್ಷಿಣೆಗಾಗಿ ಆತ ತಮ್ಮ ಪುತ್ರಿಯನ್ನು ಹಿಂಸಿಸಿ ಕೊಂದಿದ್ದಾನೆಂದು ರೇಷ್ಮಾ ಹೆತ್ತವರು ಆರೋಪಿಸಿದ್ದಾರೆ. ಆತನ ವಿರುದ್ಧ ಕೊಲೆ ಹಾಗೂ ವರದಕ್ಷಿಣೆ ಹಿಂಸೆ ಪ್ರಕರಣ ದಾಖಲಿಸಲಾಗಿದೆ. ದಂಪತಿಯ ಪುತ್ರಿಯನ್ನು ಪೊಲೀಸರು ರೇಷ್ಮಾ ಹೆತ್ತವರಿಗೆ ನೀಡಿದರೂ ಅವರು ಮಗುವನ್ನು ಸ್ವೀಕರಿಸಲು ನಿರಾಕರಿಸಿದ ಕಾರಣ ಕಾಮಿಲ್ ಕುಟುಂಬಕ್ಕೆ ಮಗುವನ್ನು ಹಸ್ತಾಂತರಿಸಲಾಯಿತು.
ರೇಷ್ಮಾಳಿಗೆ ಅಕ್ರಮ ಸಂಬಂಧವಿದೆ ಎಂದು ಕಾಮಿಲ್ ಶಂಕಿಸಿದ್ದರಿಂದ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತೆನ್ನಲಾಗಿದೆ. ಅಕ್ಟೋಬರ್ 18ರಂದು ರೇಷ್ಮಾ ತನ್ನ ಹೆತ್ತವರ ಮನೆಗೆ ತೆರಳಿ ಮರುದಿನ ಹಿಂದಿರುಗಿದ್ದು ಅದೇ ರಾತ್ರಿ ಮತ್ತೆ ಜಗಳವಾಗಿ ಕಾಮಿಲ್ ಆಕೆಯನ್ನು ಕೊಂದಿದ್ದ.