ಮೈಸೂರು: ಬುದ್ದಿಮಾಂದ್ಯ ಮಹಿಳೆಯ ಅತ್ಯಾಚಾರ, ಕೊಲೆ ಯತ್ನ; ಆರೋಪಿ ಬಂಧನ
ಮೈಸೂರು,ಅ.22: ಬುದ್ದಿಮಾಂದ್ಯ ಮಹಿಳೆಯೋರ್ವರ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾನೆನ್ನಲಾದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಥಳಿಸಿ, ನಂತರ ಪೊಲೀಸರಿಗೊಪ್ಪಿಸಿದ ಘಟನೆ ಗೌಸಿಯಾನಗರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಸಲ್ಮಾನುಲ್ಲಾ ಶರೀಫ್ ಎಂಬಾತನೇ ಬುದ್ದಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ. ಈತ ಕಬ್ಬಿಣ, ಇನ್ನಿತರ ವಸ್ತುಗಳನ್ನು ಕೊಂಡು ಮಾರಾಟ ಮಾಡುವವನಾಗಿದ್ದು, ಮೈಸೂರಿನ ಗೌಸಿಯಾನಗರದ ಮಹಿಳೆಯನ್ನು ವಿವಾಹವಾಗಿದ್ದ. ಆಗಾಗ ಪತ್ನಿ ಮನೆಗೆ ಭೇಟಿ ನೀಡುತ್ತಿದ್ದ ಈತ ಪತ್ನಿಯ ಮನೆಯ ಸಮೀಪದಲ್ಲಿದ್ದ ಬುದ್ದಿಮಾಂದ್ಯ ಮಹಿಳೆಯ ಮನೆಯಲ್ಲಿ ಆಕೆ ಒಬ್ಬಳೇ ಇರುವುದನ್ನು ಗಮನಿಸಿ ಆಕೆಯ ಮನೆಗೆ ತೆರಳಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಳಿಕ ಆಕೆಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ವೇಳೆ ಅಚಾನಕ್ಕಾಗಿ ಆಕೆಯ ಸಹೋದರಿ ಮನೆಗೆ ಬಂದಿದ್ದು, ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಸಲ್ಮಾನುಲ್ಲಾ ಶರೀಫ್ ಮನೆಯಿಂದ ಓಡಿಹೋಗಲು ಯತ್ನಿಸಿದ್ದು, ತಕ್ಷಣವೇ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ವಿಚಾರ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಉದಯಗರಿ ಠಾಣೆಯ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆತನ ವಿರುದ್ಧ ಅತ್ಯಾಚಾರ ಮತ್ತು ಕೊಲೆಯತ್ನದ ಕೇಸ್ ದಾಖಲಿಸಿ ಬಂಧಿಸಿದ್ದಾರೆ.