ಮದ್ರಸ ವಿದ್ಯಾರ್ಥಿ ಮುಹಮ್ಮದ್ ಅಝೀಂ ಸಾವಿನ ಸುತ್ತ ಹಬ್ಬಿರುವ ‘ಗುಂಪಿನಿಂದ ಥಳಿಸಿ ಹತ್ಯೆ’ ವದಂತಿ ಅಪ್ಪಟ ಸುಳ್ಳು
ದಕ್ಷಿಣ ದಿಲ್ಲಿಯ ಬೇಗಮ್ ಪುರದಲ್ಲಿರುವ ಜಾಮಿಯಾ ಫರೀದಿಯಾ ಮದ್ರಸದಲ್ಲಿ ಶುಕ್ರವಾರ ಸಂಜೆ ಸಾಕಷ್ಟು ವದಂತಿಗಳು ಕೇಳಿಬರುತ್ತಿದ್ದವು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆಗಳು ನಡೆಯುತ್ತಿದ್ದವು. ಗುರುವಾರ ಬೆಳಗ್ಗೆ ಮದ್ರಸ ವಿದ್ಯಾರ್ಥಿ ಮುಹಮ್ಮದ್ ಅಝೀಂನ ಸಾವು ಈ ಎಲ್ಲ ವದಂತಿಗಳ ಕೇಂದ್ರಬಿಂದುವಾಗಿತ್ತು. ನಿಜಕ್ಕೂ ಅದು ಅಪ್ರಾಪ್ತ ವಯಸ್ಕ ಬಾಲಕರು ಕೊಲೆ ಮಾಡಿದ್ದ ದ್ವೇಷಾಪರಾಧವಾಗಿತ್ತು.
ಗುರುವಾರ ಬೆಳಗ್ಗೆ ನಡೆದಿದ್ದ ಘಟನೆಯ ಕುರಿತು ನಗ್ನಸತ್ಯಗಳು ಇಲ್ಲಿವೆ. ಮದ್ರಸದ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿಗಳು ಮತ್ತು ಅಝೀಮ್ ನ ಮೂವರು ಸ್ನೇಹಿತರು ಹೇಳಿರುವಂತೆ ಮದ್ರಸದ ಆವರಣದಲ್ಲಿ ಆಡುತ್ತಿದ್ದ ಮಕ್ಕಳ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಮದ್ರಸದ ಮಕ್ಕಳು ಮತ್ತು ಅದಕ್ಕೆ ಹೊಂದಿಕೊಂಡಿರುವ,ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿಕೊಂಡ ಮನೆಗಳಿರುವ ವಾಲ್ಮೀಕಿ ಕ್ಯಾಂಪ್ ಎಂಬ ಜೆಜೆ ಕ್ಲಸ್ಟರ್ ಅಥವಾ ‘ಜಗ್ಗಿ’ಯಲ್ಲಿನ ಮಕ್ಕಳ ನಡುವೆ ಹೊಡೆದಾಟ ನಡೆದಿತ್ತು. ಈ ವೇಳೆ ಅಝೀಂ ಅಲ್ಲಿಯೇ ಇದ್ದ ಬೈಕೊಂದರ ಮೇಲೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದ. ಅಝೀಮ್ ನನ್ನು ಮೈದಾನದಿಂದ ಎತ್ತಿ ತಂದು ಮಸೀದಿ ಬಳಿಯಿರಿಸಿದ್ದ ವ್ಯಕ್ತಿ ವಾಲ್ಮೀಕಿ ಕ್ಯಾಂಪ್ನ ನಿವಾಸಿಯಾಗಿದ್ದ.
ಇದು ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣವಾಗಿತ್ತೇ? ಖಂಡಿತ ಅಲ್ಲ ಎಂದಿರುವ ಸುದ್ದಿ ಜಾಲತಾಣ ‘ನ್ಯೂಸ್ ಲಾಂಡ್ರಿ’, ಇದಕ್ಕೆ ಸಾಕ್ಷಾಧಾರಗಳು ತನ್ನ ಬಳಿಯಿವೆ ಎಂದು ವರದಿಯಲ್ಲಿ ಹೇಳಿದೆ. ಹೊಡೆದಾಟದಲ್ಲಿ ಭಾಗಿಯಾಗಿದ್ದ ಎಲ್ಲ ಮಕ್ಕಳೂ ಅಪ್ರಾಪ್ತ ವಯಸ್ಕರಾಗಿದ್ದರು ಮತ್ತು ಬಹುಶಃ ಎರಡೂ ಗುಂಪುಗಳಲ್ಲಿ ಸಮಾನ ಸಂಖ್ಯೆಯ ಮಕ್ಕಳಿದ್ದರು. ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯಲಾಗಿತ್ತು, ಆದರೆ ಅವು ಕೋಮುಬಣ್ಣವನ್ನುಹೊಂದಿರಲಿಲ್ಲ ಎಂದು ಅಝೀಮ್ನ ಸ್ನೇಹಿತರು ಹೇಳಿದ್ದನ್ನು ‘ನ್ಯೂಸ್ ಲಾಂಡ್ರಿ’ ಉಲ್ಲೇಖಿಸಿದೆ.
ಘಟನೆ ನಡೆದ ಬಳಿಕ ಮದ್ರಸಾದಲ್ಲಿ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರೆಲ್ಲ ಪಕ್ಕದ ವಾಲ್ಮೀಕಿ ಕ್ಯಾಂಪ್ ನಿವಾಸಿಗಳಾಗಿದ್ದಾರೆ. ಎಲ್ಲರೂ ಅಪ್ರಾಪ್ತ ವಯಸ್ಕರು ಎನ್ನುವುದು ಅವರ ಆಧಾರ್ ಕಾರ್ಡ್ಗಳ ಮೂಲಕ ದೃಢಪಟ್ಟಿದೆ.
‘ಆತ ಎಂದೂ ಸುಳ್ಳನ್ನು ಹೇಳುತ್ತಿರಲಿಲ್ಲ’ ಇದು ಅಝೀಮ್ನ ಸ್ನೇಹಿತ ಮುಹಮ್ಮದ್ ಸಾಹಿಲ್ ಹೇಳಿದ ಮಾತು. ನುಹ್-ಮೇವಾತ್ ನಿವಾಸಿಯಾಗಿರುವ ಮುಹಮ್ಮದ್ ಖಲೀಲ್ ಅವರ ಕಿರಿಯ ಪುತ್ರನಾಗಿದ್ದ ಅಝೀಂ ಒಂದೂವರೆ ವರ್ಷದ ಹಿಂದಷ್ಟೇ ಜಾಮಿಯಾ ಫರೀದಿಯಾ ಮದ್ರಸಾಕ್ಕೆ ಸೇರ್ಪಡೆಗೊಂಡಿದ್ದ. ಆತನ ಇಬ್ಬರು ಹಿರಿಯ ಸೋದರರಾದ ಮುಸ್ತಕೀನ್(13) ಮತ್ತು ಮುಸ್ತಫಾ(11) ಮೊದಲೇ ಈ ಮದ್ರಸಾದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅತ್ಯಂತ ಶಿಸ್ತುಬದ್ಧ ವಿದ್ಯಾರ್ಥಿ ಎನಿಸಿಕೊಂಡಿದ್ದ ಅಝೀಂ ಅರೆಬಿಕ್ ಮತ್ತು ಉರ್ದು ಕಲಿಯುತ್ತಿದ್ದ. ಆತ ಕುರ್ಆನ್ನ ನಾಲ್ಕು ಅಧ್ಯಾಯಗಳನ್ನೂ ಪೂರ್ಣಗೊಳಿಸಿದ್ದ. ವಿವಿಧ ಸಮಯಗಳಲ್ಲಿ ಮದ್ರಸ ತರಗತಿಗಳು ಆರಂಭಗೊಳ್ಳುತ್ತಿದ್ದು, ಬಳಿಕ ಮಕ್ಕಳು ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.
ಗುರುವಾರ ತರಗತಿಗಳಿಗೆ ರಜೆಯಿತ್ತು. ಹೀಗಾಗಿ ಮುಸ್ತಫಾ ಮತ್ತು ಮುಸ್ತಕೀನ್ ಇತರ ಹಿರಿಯ ವಿದ್ಯಾರ್ಥಿಗಳೊಂದಿಗೆ ಹೌಝ್ ರಾಣಿ ಪ್ರದೇಶಕ್ಕೆ ತೆರಳಿದ್ದರು. ರಸ್ತೆಯನ್ನು ದಾಟಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಅಝೀಂ ಸೇರಿದಂತೆ ಕೆಲವು ಸಣ್ಣಮಕ್ಕಳು ಮದ್ರಸದಲ್ಲಿಯೇ ಉಳಿದುಕೊಂಡಿದ್ದರು.
ಮದ್ರಸ ಬೇಗಮ್ಪುರದಲ್ಲಿನ ಹಳೆಯ ಕೋಟೆಗೆ ಹೊಂದಿಕೊಂಡೇ ಇದೆ. ಅದರ ಆವರಣದಲ್ಲಿ ಕೋಟೆ ಪ್ರದೇಶದ ಪಳೆಯುಳಿಕೆಗಳು ಈಗಲೂ ಉಳಿದುಕೊಂಡಿವೆ. ಅದಿರುವ ಓಣಿಯು ಮುಖ್ಯರಸ್ತೆಯನ್ನು ಸಂಪರ್ಕಿಸುತ್ತದೆ ಮತ್ತು ಎರಡೂ ಪಾರ್ಶ್ವಗಳಲ್ಲಿ ಜೆಜೆ ಕ್ಲಸ್ಟರ್ಗಳಿಂದ ಆವರಿಸಲ್ಪಟಿದೆ. ಆವರಣದಲ್ಲಿ ಹಾಸ್ಟೆಲ್, ಮಸೀದಿ, ಪುಟ್ಟ ಗಾರ್ಡನ್ ಮತ್ತು ಅಧಿಕಾರಿಗಳು ಉಳಿದುಕೊಳ್ಳುವ ಕಟ್ಟಡವಿದೆ. ಒಂದು ಪಾರ್ಶ್ವದಲ್ಲಿ ಖಾಲಿ ನಿವೇಶನವಿದ್ದು, ಅದು ವಾಲ್ಮೀಕಿ ಕ್ಯಾಂಪ್ ಗೂ ತೆರೆದುಕೊಳ್ಳುತ್ತದೆ. ಈ ಕ್ಯಾಂಪ್ ಇನ್ನೆರಡು ಜೆಜೆ ಕ್ಲಸ್ಟರ್ಗಳಿಂದ ಸುತ್ತುವರಿಯಲ್ಪಟ್ಟಿದೆ. ಅಂದು ಅಝೀಂ,ಮುಹಮ್ಮದ್ ಫೈಝಾನ್, ಸಾಹಿಲ್ ಮತ್ತು ಮುಹಮ್ಮದ್ ಆಸಿಫ್ ಮದ್ರಸಾದ ಆವರಣದಲ್ಲಿ ಗಿಲ್ಲಿ-ದಾಂಡು ಆಡುತ್ತಿದ್ದರು. ಇದೇ ವೇಳೆ ಜಗ್ಗಿಯಲ್ಲಿನ ಮಕ್ಕಳ ಗುಂಪೊಂದು ಅಲ್ಲಿಯ ಮೈದಾನದಲ್ಲಿ ಆಟವಾಡುತ್ತಿತ್ತು. ಮದ್ರಸದ ಮಕ್ಕಳು ಹೊಡೆದ ಗಿಲ್ಲಿ ಜಗ್ಗಿಯ ಮಕ್ಕಳು ಆಟವಾಡುತ್ತಿದ್ದ ಕಡೆಗೆ ಬಿದ್ದಾಗಿ ಈ ಮಕ್ಕಳು ಅದನ್ನು ಕೊಡುವಂತೆ ಕೇಳಿದ್ದರು. ಆದರೆ ಜಗ್ಗಿಯ ಮಕ್ಕಳು ನಿರಾಕರಿಸಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿದ್ದರು ಎನ್ನುವುದು ಸಾಹಿಲ್ ಹೇಳಿಕೆ.
ಅಝೀಂನ ಗೆಳೆಯರು
ಜಗ್ಗಿಯ ಮಕ್ಕಳು ಕಲ್ಲು ತೂರಾಟ ಆರಂಭಿಸಿದ್ದು ಮದ್ರಸ ಮಕ್ಕಳು ಕೇಳಿಕೊಂಡರೂ ನಿಲ್ಲಿಸಿರಲಿಲ್ಲ. ಇದು ವಿಕೋಪಕ್ಕೆ ತೆರಳಿ ಅವರ ನಡುವೆ ಹೊಡೆದಾಟ ಶುರುವಿಟ್ಟುಕೊಂಡಿತ್ತು. ವಾಲ್ಮೀಕಿ ಕ್ಯಾಂಪ್ನ ಕೆಲವು ಮಕ್ಕಳು ಪಟಾಕಿಗಳನ್ನು ಸಿಡಿಸುತ್ತಿದ್ದು, ಅವರು ಎಸೆದಿದ್ದ ಪಟಾಕಿ ಬಾಂಬ್ ಫೈಝಾನ್ಗೆ ತಗುಲಿತ್ತು.
ಅಝೀಂ ಎಲ್ಲರಿಗಿಂತ ಕಿರಿಯನಾಗಿದ್ದು ದೂರವೇ ನಿಂತು ನೋಡುತ್ತಿದ್ದ. ಹೊಯ್ ಕೈ ಶುರುವಾದಾಗ ಬಹುಶಃ ಅದನ್ನು ತಪ್ಪಿಸಲು ಆತ ಮಧ್ಯೆ ಪ್ರವೇಶಿಸಿದ್ದ. ಈ ವೇಳೆ ಜಗ್ಗಿಯ ಹುಡುಗನೋರ್ವ ಆತನನ್ನು ಬೈಕಿನ ಮೇಲೆ ತಳ್ಳಿದ್ದ. ಕೆಳಕ್ಕೆ ಬಿದ್ದಿದ್ದರೂ ಆ ಮಕ್ಕಳು ಅಝೀಮ್ ನನ್ನು ಥಳಿಸುತ್ತಲೇ ಇದ್ದರು ಮತ್ತು ಆತನ ಎದೆಯ ಮೇಲೂ ನಿಂತಿದ್ದರು.
ಅಝೀಮ್ನನ್ನು ತಕ್ಷಣವೇ ಮದನ ಮೋಹನ ಮಾಳವೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದ ಎಂದು ಮದ್ರಸದ ಉಸ್ತುವಾರಿ ಮುಹಮ್ಮದ್ ಅಲಿ ಜೌಹಾರ್(62) ತಿಳಿಸಿದರು.
ತನಗೆ ದಿಲ್ಲಿಯಲ್ಲಿ ಇನ್ನೇನೂ ಉಳಿದಿಲ್ಲ. ತನ್ನ ಕಿರಿಯ ಪುತ್ರನನ್ನು ಕಳೆದುಕೊಂಡಿದ್ದೇನೆ. ಇನ್ನಿಬ್ಬರು ಮಕ್ಕಳ ಜೀವಗಳನ್ನು ಅಪಾಯದಲ್ಲಿ ತಳ್ಳಲು ತಾನು ಸಿದ್ಧನಿಲ್ಲ ಎಂದು ಹೇಳಿದ ಮುಹಮ್ಮದ್ ಖಲೀಲ್, ಶನಿವಾರ ಅಝೀಂ ಮೃತದೇಹದೊಂದಿಗೆ ಮುಸ್ತಕೀನ್ ಮತ್ತು ಮುಸ್ತಫಾ ಅವರನ್ನೂ ಊರಿಗೆ ಕರೆದೊಯ್ದಿದ್ದಾರೆ. ತನಗೆ ನ್ಯಾಯ ದೊರೆಯಬೇಕು ಎನ್ನುವುದೊಂದೇ ಅವರ ಬೇಡಿಕೆ ಮತ್ತು ಆಪ್ ಸರಕಾರ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತನಗೆ ನ್ಯಾಯವನ್ನು ದೊರಕಿಸುತ್ತಾರೆ ಎನ್ನುವುದು ಅವರ ಭರವಸೆ. ಆದರೆ ದಿಲ್ಲಿ ಪೊಲೀಸರು ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದಾರೆ.
ಮದ್ರಸ ಶುಕ್ರವಾರ ಅಝೀಮ್ ರ ಮಯ್ಯತ್ ನಮಾಝ್ ನಡೆಸಿತ್ತು. ಈ ಸಂದರ್ಭ ನಡೆದ ಸಂತಾಪ ಸೂಚಕ ಸಭೆಯಲ್ಲಿ ಆಪ್ ಶಾಸಕರಾದ ಸೋಮನಾಥ ಭಾರ್ತಿ ಮತ್ತು ಅಮಾನತುಲ್ಲಾ ಖಾನ್ ಉಪಸ್ಥಿತರಿದ್ದರು. ಅಝೀಂ ಕುಟುಂಬಕ್ಕೆ ಪರಿಹಾರದ ಬೇಡಿಕೆಯನ್ನು ಸಭೆಯು ಮುಂದಿಟ್ಟಿದ್ದು, ಅದು ಈಡೇರುವ ಭರವಸೆಯನ್ನು ಭಾರ್ತಿ ನೀಡಿದ್ದಾರೆ.
ಶುಕ್ರವಾರದ ನಮಾಝ್ ವೇಳೆ ಹೊರಗಿನವರು, ರಾಜಕಾರಣಿಗಳು ಮತ್ತು ವಕೀಲರು ಒಗ್ಗಟ್ಟಿನಿಂದ ಸೇರಿದ್ದರು. ಘಟನೆಯ ಕುರಿತು ಹೇಳಲು ಪ್ರತಿಯೊಬ್ಬರಲ್ಲಿಯೂ ಪ್ರತ್ಯೇಕ ಕಥೆಗಳಿದ್ದವು. ಗುಂಪಿನಿಂದ ಥಳಿಸಿ ಹತ್ಯೆಯ ಕೋನವು ಅವರೆಲ್ಲರ ಹೇಳಿಕೆಗಳಲ್ಲಿಯ ಸಾಮಾನ್ಯ ಎಳೆಯಾಗಿತ್ತು. ಅಝೀಮ್ನನ್ನು ಥಳಿಸಿದವರು ಹಿರಿಯ ಹುಡುಗರಾಗಿದ್ದರು ಮತ್ತು ಅದು ದ್ವೇಷದ ಕೃತ್ಯವಾಗಿತ್ತು ಎಂಬ ಮಾತು ಅಲ್ಲಿ ಪುನರಾವರ್ತನೆಯಾಗುತ್ತಲೇ ಇತ್ತು.
“ಇವೆಲ್ಲ ಸಾಮಾನ್ಯ ಹೊಡೆದಾಟಗಳಾಗಿವೆ. ಕಳೆದ ದೀಪಾವಳಿಯಂದು ನಾನೂ ಮದ್ರಸ ಮಕ್ಕಳ ಜೊತೆ ಜಗಳವಾಡಿದ್ದೆ. ನಾವೆಲ್ಲ ಅಲ್ಲಿ ಆಟವಾಡಲು ಹೋದರೆ ಅವರು ನಮ್ಮನ್ನು ಥಳಿಸುತ್ತಾರೆ” ಎಂದು ‘ನ್ಯೂಸ್ ಲಾಂಡ್ರಿ’ ಭೇಟಿಯಾದ ಆರೋಪಿಯಲ್ಲೋರ್ವನ ಸೋದರ ತಿಳಿಸಿದ.
“ಮಕ್ಕಳು ತವ್ಮೊಳಗೆ ಜಗಳವಾಡುತ್ತಲೇ ಇರುತ್ತಾರೆ. ನಮ್ಮ ಮಕ್ಕಳು ಅಲ್ಲಿ ಹೋಗಿ ಆಡುತ್ತಿರುತ್ತಾರೆ ಮತ್ತು ಈ ಜಗಳಗಳು ಹೊಸದೇನಲ್ಲ” ಎಂದು ಇನ್ನೋರ್ವ ಆರೋಪಿಯ ತಂದೆ ಹೇಳಿದರು. ಮದ್ರಸದ ಮೂಲಕ ತೆರಳುವ ಮಾರ್ಗವು ಮುಖ್ಯರಸ್ತೆಗೆ ಹತ್ತಿರವಾಗುತ್ತದೆ ಎಂಬ ಕಾರಣ ವಾಲ್ಮೀಕಿ ಕ್ಯಾಂಪ್ನ ಜನರು ಅದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದು ಇಲ್ಲಿಯ ಕಚ್ಚಾಟದ ಮೂಲ ಕಾರಣವಾಗಿದೆ.
ಇದು ಸಾರ್ವಜನಿಕ ಮಾರ್ಗವಲ್ಲ. ಅದು ಮದ್ರಸ ಆವರಣದ ಭಾಗವಾಗಿದೆ ಮತ್ತು ನಮ್ಮ ಪ್ರಾರ್ಥನೆಯ ಸ್ಥಳವಾಗಿದೆ ಎನ್ನುತ್ತಾರೆ ಮದ್ರಸಾದ ಮೌಲಾನಾ ಅಲಿ. ಕುಡುಕರು ಮತ್ತು ಮಾದಕ ದ್ರವ್ಯ ವ್ಯಸನಿಗಳು ಮಸೀದಿಯ ಮೂಲಕ ಸಾಗುತ್ತಾರೆ. ಅವರು ಇಲ್ಲಿ ಜೂಜಾಟವನ್ನು ಆಡುತ್ತಾರೆ. ನಮ್ಮ ಪ್ರಾರ್ಥನಾ ಸ್ಥಳದಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಶುಕ್ರವಾರ ಬೆಳಗ್ಗೆ ವಾಲ್ಮೀಕಿ ಕ್ಯಾಂಪ್ನ ಬಂಟಿ ಎಂಬಾತ ತಮಗೆ ಜೀವ ಬೆದರಿಕೆಯನ್ನೊಡ್ಡಿದ್ದಾನೆ ಎಂದು ಮೌಲಾನಾ ಮತ್ತು ಅವರ ಸಂಗಡಿಗರು ತಿಳಿಸಿದರು. ಮದ್ರಸ ಮತ್ತು ಜಗ್ಗಿ ನಿವಾಸಿಗಳ ನಡುವೆ ಉದ್ವಿಗ್ನತೆಯ ಹಿಂದೆ ಕ್ಯಾಂಪ್ ನಿವಾಸಿ ಲಿಯಾಕತ್ ಅಲಿ ಸರೋಜ್ ಎಂಬ ಮಹಿಳೆಯ ಕೈವಾಡವಿದೆ ಎಂದು ಅವರು ತಿಳಿಸಿದರು. ಕ್ಯಾಂಪ್ನ ನಿವಾಸಿಗಳ ವಿರುದ್ಧ ಮದ್ರಸ ಆಡಳಿತ ಮತ್ತು ಮಸೀದಿಗೆ ಬರುವವರ ಹಲವಾರು ದೂರುಗಳಿವೆ. ಕಳೆದ ವರ್ಷ ಜಮಾಅತ್ನವರು ಬಂದಿದ್ದಾಗ ಮಸೀದಿಯೊಳಗೆ ಖಾಲಿ ಮದ್ಯದ ಬಾಟ್ಲಿಗಳನ್ನು ಎಸೆಯಲಾಗಿತ್ತು. ದೇವರ ದಯೆಯಿಂದ ಯಾರಿಗೂ ಗಾಯಗಳಾಗಿರಲಿಲ್ಲ ಎಂದು ಜೌಹರ್ ತಿಳಿಸಿದರು. ಮಸೀದಿ ಆವರಣದಲ್ಲಿ ಅನಧಿಕೃತ ಪ್ರವೇಶವನ್ನು ತಡೆಯಲು ಗೋಡೆಯನ್ನು ನಿರ್ಮಿಸಲು ದಂಡಾಧಿಕಾರಿಗಳು ಮದ್ರಸ ಆಡಳಿತಕ್ಕೆ ಅನುಮತಿ ನೀಡಿದ್ದಾರೆ. ಗೋಡೆ ನಿರ್ಮಾಣಕ್ಕೆ ಪೊಲಿಸರು ಬೆಂಬಲ ನೀಡಬೇಕಿತ್ತು. ಘರ್ಷಣೆಗಳ ಕಾರಣವನ್ನು ಬೇರುಸಹಿತ ಕಿತ್ತುಹಾಕಲು ಗೋಡೆಯನ್ನು ನಿರ್ಮಿಸಲು ಉತ್ಸಾಹಿ ಗುಂಪು ಮುಂದಾಗಿತ್ತಾದರೂ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಹಿರಿಯರು ಹೇಳಿದ್ದರಿಂದ ಅದರಿಂದ ಹಿಂದೆ ಸರಿದಿದ್ದರು ಎಂದು ವಕೀಲ ಶಕೀಲ್ ಅಖ್ತರ್ ತಿಳಿಸಿದರು.
ದ್ವೇಷಮಯ ವಾತಾವರಣವನ್ನು ಸೃಷ್ಟಿಸಲು ಕ್ಯಾಂಪ್ ನಿವಾಸಿಗಳು ಹಲವಾರು ಬಾರಿ ಪ್ರಯತ್ನಿಸಿದ್ದಾರೆ. ಇದು ವಕ್ಫ್ ಆಸ್ತಿಯಾಗಿದೆ. ಅವರು ಈ ಆವರಣದಲ್ಲೇಕೆ ರಾವಣ ದಹನವನ್ನು ಮಾಡಬೇಕು?, ದೇವಸ್ಥಾನದತ್ತ ತಾಝಿಯಾ ಮೆರವಣಿಗೆಯನ್ನು ಒಯ್ದರೆ ಅದು ಶಾಂತಿಯನ್ನು ಕದಡುವ ಉದ್ದೇಶಪೂರ್ವಕ ಪ್ರಯತ್ನವಾಗುವಂತೆ ಇದೂ ಕೂಡ ಎಂದು ಮೌಲಾನಾ ಹೇಳಿದರು.
ಆದರೆ ಕ್ಯಾಂಪ್ ನಿವಾಸಿಗಳು ಹೇಳುವುದೇ ಬೇರೆ. “ನಾವು ಮಸೀದಿ ಆವರಣದಲ್ಲಿ ರಾವಣ ದಹನವನ್ನು ಮಾಡಲಿಲ್ಲ. ಆದರೆ ಬೇರೆ ಜಾಗವಿಲ್ಲದ್ದರಿಂದ ಮಕ್ಕಳು ರಾವಣ ಪ್ರತಿಕೃತಿಯ ಭಾಗಗಳನ್ನು ಅಲ್ಲಿ ಇಟ್ಟಿದ್ದು ಹೌದು” ಎಂದು ಕ್ಯಾಂಪ್ ನಲ್ಲಿ ವಾಸವಿರುವ ಐದು ಮುಸ್ಲಿಂ ಕುಟುಂಬಗಳ ಪೈಕಿ ಒಂದಕ್ಕೆ ಸೇರಿದ ಮುಹಮ್ಮದ್ ಶೆಹಜಾದ್.
“ಮಸೀದಿಯವರು ನಮ್ಮ ಮಕ್ಕಳನ್ನು ಥಳಿಸುತ್ತಾರೆ. ಆಗಾಗ್ಗೆ ನಮಗೆ ತೊಂದರೆಗಳನ್ನು ನೀಡುತ್ತಿರುತ್ತಾರೆ” ಎಂದು ಅಜಯ್ ಎನ್ನುವವರು ಆರೋಪಿಸುತ್ತಾರೆ. ಮೌಲಾನಾ ಅವರು ದೂರಿರುವ ಸರೋಜ್ ಎಂಬ ಮಹಿಳೆ ತನ್ನ ವಿರುದ್ಧದ ಆರೋಪಗಳು ಸುಳ್ಳು ಎನ್ನುತ್ತಾರೆ. “ವಾಸ್ತವದಲ್ಲಿ ಇತ್ತೀಚಿಗೆ ನನ್ನ ಮಗನ ಮೇಲೆ ಹಲ್ಲೆ ನಡೆದಿತ್ತು. ನಮಗೆ ಬೇರೆ ಖಾಲಿ ಜಾಗವಿಲ್ಲ. ಭೂಕಂಪವೇನಾದರೂ ಸಂಭವಿಸಿದರೆ ತ್ವರಿತವಾಗಿ ಪಾರಾಗಲು ಅದೊಂದೇ ನಮಗೆ ಮಾರ್ಗವಾಗಿದೆ. ನಾವು ಇಲ್ಲಿಯೇ ಸಾಯಬೇಕೇ” ಎಂದು ಪ್ರಶ್ನಿಸಿದರು.
ಮದ್ರಸ ಮೈದಾನವು ಸರಕಾರಿ ಆಸ್ತಿಯಾಗಿದೆ. ಅಲ್ಲಿಗೆ ಪ್ರವೇಶವನ್ನು ತಡೆಯುವ ಯಾವುದೇ ಪ್ರಯತ್ನವು ನಮಗೆ ಮುಖ್ಯ ರಸ್ತೆಯನ್ನು ಸುಲಭವಾಗಿ ಸಂಪರ್ಕಿಸುವ ಅವಕಾಶವನ್ನು ನಿರಾಕರಿಸುತ್ತದೆ ಎಂದು ಕ್ಯಾಂಪ್ ಮಹಿಳೆಯರು ವಾದಿಸುತ್ತಾರೆ.