ನಂತೂರಿನಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು
ಮಂಗಳೂರು, ನ.13: ನಗರದ ನಂತೂರು-ಕೆಪಿಟಿ ರಸ್ತೆಯಲ್ಲಿ ಕಾರಿಗೆ ಬೈಕ್ ಢಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದ ಬೈಕ್ ಸವಾರನ ಮೇಲೆ, ಕಾಲೇಜು ಬಸ್ಸೊಂದು ಚಲಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.
ಕೊಣಾಜೆ ಇನೊಳಿ ನಿವಾಸಿ ವಿಲ್ಸನ್ (26) ಮೃತಪಟ್ಟ ಯುವಕ. ಸಹಸವಾರ ಮೆಂಡೋನ್ಸಾ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಸಂಜೆ 7 ಗಂಟೆ ವೇಳೆ ಕೆಟಿಎಂ ಬೈಕ್ನಲ್ಲಿ ಇಬ್ಬರು ಪಾದುವ ಸಮೀಪದಿಂದ ಕೆಪಿಟಿ ಕಡೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಲ್ಲಿನ ಪೆಟ್ರೋಲ್ ಪಂಪ್ ಎದುರುಗಡೆ ಇವರು ಸಂಚರಿಸುತ್ತಿದ್ದ ಬೈಕ್ಗೆ ಕಾರು ಢಿಕ್ಕಿಯಾಗಿದೆ. ಈ ವೇಳೆ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಅದೇ ವೇಳೆ ಆ ರಸ್ತೆಯಾಗಿ ಬಂದ ಕಾಲೇಜು ಬಸ್ಸೊಂದು ವಿಲ್ಸನ್ ಮೇಲೆಯೇ ಚಲಿಸಿದೆ. ಇದರಿಂದ ಗಂಭೀರ ಗಾಯಗೊಂಡ ವಿಲ್ಸನ್ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿಸಲಾಯಿತಾದರೂ ಚಿಕಿತ್ಸೆಗೆ ಲಿಸದೆ ಮೃತಪಟ್ಟಿದ್ದಾರೆ. ಮೆಂಡೋನ್ಸಾ ಅವರಿಗೂ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಲ್ಸನ್ ವಿದೇಶದಲ್ಲಿದ್ದು, ವೀಸಾ ನವೀಕರಣ ಕಾರಣದಿಂದ ಕೆಲವು ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಮೆಂಡೋನಾ ನಗರದ ಕಾಲೇಜೊಂದರ ಎಂಬಿಎ ವಿದ್ಯಾರ್ಥಿಯಾಗಿದ್ದಾರೆ.
ಘಟನೆಯ ಬಗ್ಗೆ ನಗರ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.