ಒಡಿಶಾದ ಕ್ರೀಡಾಂದೋಲನಕ್ಕೆ ಕೈಜೋಡಿಸಿದ ಕುಂಬ್ಳೆ, ಗೋಪಿಚಂದ್, ನಾರಂಗ್
ಭುವನೇಶ್ವರ, ನ.13: ಒಡಿಶಾ ರಾಜ್ಯ ದೇಶದಲ್ಲಿ ಕ್ರೀಡಾ ಆಂದೋಲನದ ನೇತೃತ್ವವಹಿಸಿಕೊಂಡಿದೆ. ದೇಶದ ಅತ್ಯಂತ ದೊಡ್ಡ ಸ್ಪೋರ್ಟ್ಸ್ ಹಬ್ ಆಗುವ ಪ್ರಯತ್ನದ ಭಾಗವಾಗಿ ಒಡಿಶಾ ಭಾರತದ ಮೂವರು ಕ್ರೀಡಾ ಸ್ಟಾರ್ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಭಾರತದ ಮಾಜಿ ಕ್ರಿಕೆಟ್ ನಾಯಕ ಅನಿಲ್ ಕುಂಬ್ಳೆ, ಬ್ಯಾಡ್ಮಿಂಟನ್ ಸ್ಟಾರ್ ಪಿ.ಗೋಪಿಚಂದ್ ಹಾಗೂ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಒಡಿಶಾದ ಕ್ರೀಡಾ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಇವರ ಜೊತೆ ದೇಶದ ಕೆಲವು ಪ್ರಮುಖ ಕೈಗಾರಿಕಾ ಸಮೂಹಗಳು ಕ್ರೀಡೆಯನ್ನು ಉತ್ತೇಜಿಸಲು ಯತ್ನಿಸುತ್ತಿರುವ ಒಡಿಶಾಕ್ಕೆ ಸಹಾಯದ ಮೂಲಕ ಬೆಂಬಲ ನೀಡುವಂತೆ ಕೋರಿವೆ. ನ.28 ರಿಂದ ಆರಂಭವಾಗಲಿರುವ ಪುರುಷರ ಹಾಕಿ ವಿಶ್ವಕಪ್ನ ಆತಿಥ್ಯವಹಿಸಿಕೊಂಡಿರುವ ಕಳಿಂಗ ಸ್ಟೇಡಿಯಂನಲ್ಲಿ ವಿವಿಧ ಕ್ರೀಡೆಗಳ ಉನ್ನತ ಪ್ರದರ್ಶನ ಕೇಂದ್ರಗಳ ಅಭಿವೃದ್ಧಿಗೆ ಚಿಂತಿಸಲಾಗುತ್ತಿದೆ.
ವೇಟ್ಲಿಫ್ಟಿಂಗ್ನ ಉನ್ನತ ಪ್ರದರ್ಶನ ಕೇಂದ್ರ ಸ್ಥಾಪಿಸಲು ಕುಂಬ್ಳೆ ಮಾಲಕತ್ವದ ಕಂಪೆನಿ ಟೆನ್ವಿಕ್ ಸ್ಪೋರ್ಟ್ಸ್,ಕೆಜೆಎಸ್ ಅಹ್ಲುವಾಲಿಯ ಗ್ರೂಪ್ನೊಂದಿಗೆ ಕೈಜೋಡಿಸಿದೆ.
‘‘ಒಡಿಶಾದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಮುಖ್ಯಮಂತ್ರಿ(ನವೀನ್ ಪಟ್ನಾಯಕ್)ದೂರದೃಷ್ಟಿ ನಿಜಕ್ಕೂ ಶ್ರೇಷ್ಠವಾಗಿದೆ.ರಾಜ್ಯದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಗೌರವ ನನಗೆ ಲಭಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’’ ಎಂದು ಲೆಗ್ ಸ್ಪಿನ್ ದಂತಕತೆ ಕುಂಬ್ಳೆ ಹೇಳಿದ್ದಾರೆ.