ನೆಹರೂ ಕೊಡುಗೆಗಳು ದೇಶಕ್ಕೆ ಸಂಪತ್ತು: ವೀರಪ್ಪ ಮೊಯ್ಲಿ
ಮಂಗಳೂರು, ನ.14: ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿ, ಸ್ವತಂತ್ರ ಸಂಸ್ಥೆಗಳ ಸ್ಥಾಪನೆ, ಜಾತ್ಯತೀತ ಸಂಸ್ಕೃತಿಯ ಪ್ರತಿಪಾದನೆ, ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಂತಹ ಕೊಡುಗೆಗಳು ಭಾತದ ಸಂಪತ್ತುಗಳಾಗಿವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಾ.ಎಂ.ವೀರಪ್ಪಮೊಯ್ಲಿ ಅಭಿಪ್ರಾಯಪಟ್ಟರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಜರುಗಿದ ನೆಹರೂ ಅವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ದಿನಗಳಲ್ಲಿ ಇತಿಹಾಸ ತಿರುಚುವವರು, ಸ್ವತಂತ್ರ ಸಂಸ್ಥೆಗಳನ್ನು ವಿರೋಧಿಸುವವರು ಅಧಿಕಾರಕ್ಕೇರಿರುವುದು ದೇಶಕ್ಕೆ ದುರಂತ. ನೆಹರೂರವರ ಆದರ್ಶಗಳನ್ನು ಪಾಲಿಸುವ ಮೂಲಕ ದೇಶದ ಸಂಸ್ಕೃತಿ, ಸಮೃದ್ಧಿಯನ್ನು ಉಳಿಸುವಂತಹ ಕಾರ್ಯ ನಡೆಯಬೇಕಾಗಿದೆ ಎಂದು ಮೊಯ್ಲಿ ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ತ್ಯಾಗ ಬಲಿದಾನಗಳನ್ನು ಮಾಡಿದ ನೆಹರೂ ಕುಟುಂಬವನ್ನು ಅಗೌರವಿಸುವ ಕಾರ್ಯವು ದೇಶಕ್ಕೆ ಮಾಡುವ ಅಪಮಾನವಾಗಿದೆ. ಬಹುಸಂಸ್ಕೃತಿ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವುದು, ಸಂವಿಧಾನವನ್ನು ರಕ್ಷಿಸುವುದು, ಮತೀಯ ಸಾಮರಸ್ಯಕ್ಕೆ ಶ್ರಮಿಸುವುದರ ಮೂಲಕ ನೆಹರೂ ಅವರ ಕನಸನ್ನು ನನಸಾಗಿಸಬೇಕು ಎಂದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಪಿ.ವಿ. ಮೋಹನ್, ಕಾರ್ಪೊರೇಟರ್ಗಳಾದ ಶಶಿಧರ ಹೆಗ್ಡೆ, ಅಬ್ದುರ್ರವೂಫ್, ಕೆ. ಹರಿನಾಥ್, ಅಪ್ಪಿ, ಆಶಾ ಡಿಸಿಲ್ವಾ, ಜೆಸಿಂತಾ ಆಲ್ಫ್ರೆಡ್, ಹರ್ಷ ಮೊಯ್ಲಿ, ಸಬಿತಾ ಮಿಸ್ಕಿತ್, ನಾಗವೇಣಿ, ಜಿಪಂ ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಅಬ್ಬಾಸ್ ಅಲಿ, ನಾಗೇಶ್ ಭಂಡಾರಿ, ವಿಶ್ವಾಸ್ ಕುಮಾರ್ ದಾಸ್, ಪದ್ಮನಾಭ ನರಿಂಗಾನ, ಲುಕ್ಮಾನ್ ಬಂಟ್ವಾಳ, ನೀರಜ್ ಪಾಲ್, ಖಾಲಿದ್ ಉಜಿರೆ, ಜಯಶೀಲ ಅಡ್ಯಂತಾಯ, ಅಖಿಲಾ ಆಳ್ವಾ, ಕೇಶವ ಮರೋಳಿ, ಮರಿಯಮ್ಮ ಥೋಮಸ್, ಶಬ್ಬೀರ್ ಸಿದ್ದಕಟ್ಟೆ, ಪ್ರೇಮ್ ಬಳ್ಳಾಲ್ಭಾಗ್, ನಝೀರ್ ಬಜಾಲ್, ಪದ್ಮನಾಭ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.