ಸಿಬಿಐ ಮುಖ್ಯಸ್ಥರನ್ನು ರಜೆ ಮೇಲೆ ಕಳುಹಿಸುವ ಮೊದಲು ಆಯ್ಕೆ ಸಮಿತಿಯನ್ನು ಸಂಪರ್ಕಿಸಿಲ್ಲವೇಕೆ?
ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಹೊಸದಿಲ್ಲಿ, ಡಿ.5: ಸಿಬಿಐನ ಇಬ್ಬರು ಉನ್ನತಾಧಿಕಾರಿಗಳಾದ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ತಾನಾರನ್ನು ದಿಢೀರನೇ, ರಾತೋರಾತ್ರಿ ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂಕೋರ್ಟ್ ಗುರುವಾರ ಪ್ರಶ್ನೆಗಳ ಸುರಿಮಳೆಗೈದಿತು.
ಸಿಬಿಐ ಮುಖ್ಯಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಆಯ್ಕೆ ಸಮಿತಿಯನ್ನು ಸಂಪರ್ಕಿಸುವ ನಿಯಮವಿದೆ. ಆದರೆ, ಸರಕಾರ ಈ ನಿಯಮ ಪಾಲಿಸಿಲ್ಲ ಏಕೆ ಎಂದು ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.
‘‘ನೀವು ದೀರ್ಘಸಮಯದಿಂದ ಇಬ್ಬರು ಅಧಿಕಾರಿಗಳನ್ನು ಸಹಿಸಿಕೊಂಡಿದ್ದರೆ, ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ’’ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಕೇಂದ್ರ ವಿಚಕ್ಷಣ ಆಯೋಗಕ್ಕೆ ತಿಳಿಸಿದರು.
ಜುಲೈ ತಿಂಗಳಿಂದ ಸಿಬಿಐ ಉನ್ನತಾಧಿಕಾರಿಗಳಿಬ್ಬರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಕಾರಣ, ಅಸಾಮಾನ್ಯ ಸಂದರ್ಭದಲ್ಲಿ ಇಬ್ಬರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು ಎಂದು ಸರಕಾರಿ ವಕೀಲ ಕೆ.ಕೆ.ವೇಣುಗೋಪಾಲ್ ನಿನ್ನೆ ನ್ಯಾಯಾಧೀಶರಿಗೆ ತಿಳಿಸಿದ್ದರು.