ಗುಂಪು ಹತ್ಯೆ ಸಂಸ್ಕೃತಿ ನಿಲ್ಲಬೇಕು: ಹತ್ಯೆಗೈಯ್ಯಲ್ಪಟ್ಟ ಉ.ಪ್ರ ಪೊಲೀಸ್ ಅಧಿಕಾರಿಯ ಪುತ್ರ
ಹೊಸದಿಲ್ಲಿ,ಡಿ.6: ಗುಂಪು ಹತ್ಯೆ ಮತ್ತು ಹಿಂದು-ಮುಸ್ಲಿಂ ಗಲಭೆಯನ್ನು ತೀವ್ರವಾಗಿ ಖಂಡಿಸಿರುವ ಉತ್ತರ ಪ್ರದೇಶದಲ್ಲಿ ಹತ್ಯೆಗೈಯ್ಯಲ್ಪಟ್ಟ ಪೊಲೀಸ್ ಅಧಿಕಾರಿಯ ಪುತ್ರ ಗುಂಪು ಹತ್ಯೆ ಸಂಸ್ಕೃತಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಅಭಿಷೇಕ್ ಸಿಂಗ್, ಇಂದು ನನ್ನ ತಂದೆಯನ್ನು ಹತ್ಯೆ ಮಾಡಲಾಗಿದೆ. ನಾಳೆ ಒಂದು ಗುಂಪು ಉನ್ನತ ಪೊಲೀಸ್ ಅಧಿಕಾರಿಯ ಹತ್ಯೆ ಮಾಡಬಹುದು. ನಂತರ ಮುಂದೊಂದು ದಿನ ಸಚಿವರನ್ನು ಕೊಲ್ಲಬಹುದು. ಗುಂಪು ಹತ್ಯೆ ಸಂಸ್ಕೃತಿ ಹೀಗೆಯೇ ಮುಂದುವರಿಯಲು ಬಿಡಬೇಕೇ? ಖಂಡಿತವಾಗಿಯೂ ಇಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಅಭಿಷೇಕ್ ಸಿಂಗ್, ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಗೋಹತ್ಯೆ ನಡೆದಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಗುಂಪುನಿಂದ ಗುಂಡಿಟ್ಟು ಹತ್ಯೆ ಮಾಡಲ್ಪಟ್ಟ ಪೊಲೀಸ್ ನಿರೀಕ್ಷಕ ಸುಬೋಧ್ ಕುಮಾರ್ ಸಿಂಗ್ ಅವರ ಪುತ್ರರಾಗಿದ್ದಾರೆ. ಮುಂದೊಂದು ದಿನ ಭಾರತದಲ್ಲಿ ನಾವು ಪರಸ್ಪರರನ್ನು ಹತ್ಯೆ ಮಾಡುವ ದಿನ ಬರದೇ ಇದ್ದರೆ ಸಾಕು ಎಂದು ನಾನು ಬೇಡುತ್ತೇನೆ. ಹಾಗಾದಲ್ಲಿ ಪಾಕಿಸ್ತಾನ, ಚೀನಾ ಅಥವಾ ಇನ್ಯಾರಿಗೋ ನಮ್ಮ ವಿರುದ್ಧ ಏನನ್ನೂ ಮಾಡುವ ಅಗತ್ಯವಿರುವುದಿಲ್ಲ ಎಂದು ಅಭಿಷೇಕ್ ಆತಂಕ ವ್ಯಕ್ತಪಡಿಸಿದ್ದಾರೆ.