ಕೇಂದ್ರದಿಂದ ಕೇರಳಕ್ಕೆ 3,048 ಕೋ.ರೂ.ಗಳ ಹೆಚ್ಚುವರಿ ನೆರೆ ಪರಿಹಾರ ಮಂಜೂರು
ಹೊಸದಿಲ್ಲಿ,ಡಿ.6: ಕಳೆದ ಆಗಸ್ಟ್ನಲ್ಲಿ ಭೀಕರ ನೆರೆಹಾವಳಿಗೆ ತುತ್ತಾಗಿದ್ದ ಕೇರಳವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್ಆರ್ಡಿಎಫ್)ಯಿಂದ 3,048.39 ಕೋ.ರೂ.ಗಳ ಹೆಚ್ಚುವರಿ ನೆರವನ್ನು ಪಡೆಯಲಿದೆ ಎಂದು ಗುರುವಾರ ಇಲ್ಲಿ ಅಧಿಕಾರಿಗಳು ತಿಳಿಸಿದರು. ಜೊತೆಗೆ ‘ತಿತ್ಲಿ‘ಚಂಡಮಾರುತ ಪೀಡಿತ ಆಂಧ್ರಪ್ರದೇಶ 539 ಕೋ.ರೂ. ಮತ್ತು ಭೂಕುಸಿತಗಳು ಸಂಭವಿಸಿದ್ದ ನಾಗಾಲ್ಯಾಂಡ್ 131 ಕೋ.ರೂ.ಗಳ ಹೆಚ್ಚುವರಿ ನೆರವನ್ನು ಪಡೆಯಲಿವೆ.
ಗೃಹಸಚಿವ ರಾಜನಾಥ ಸಿಂಗ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ನೆರವು ನೀಡಿಕೆಗೆ ಒಪ್ಪಿಗೆಯನ್ನು ಸೂಚಿಸಿದೆ ಎಂದು ಗೃಹಸಚಿವಾಲಯದ ವಕ್ತಾರರು ತಿಳಿಸಿದರು.
ಕೇರಳ ಸರಕಾರವು ಕೇಂದ್ರದಿಂದ 4,700 ಕೋ.ರೂ.ನೆರೆ ಪರಿಹಾರವನ್ನು ಕೋರಿತ್ತು.
ವಿತ್ತ ಸಚಿವ ಅರುಣ ಜೇಟ್ಲಿ,ಕೃಷಿ ಸಚಿವ ರಾಧಾಮೋಹನ ಸಿಂಗ್,ಗೃಹ ಕಾರ್ಯದರ್ಶಿ ರಾಜೀವ ಗಾಬಾ ಮತ್ತು ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಳು ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದರು.
Next Story