ದಾವಣಗೆರೆ: 3ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಧರಣಿ
ದಾವಣಗೆರೆ,ಡಿ.13: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಡಿಸಿ ಕಚೇರಿ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಇಲ್ಲಿನ ಡಿಸಿ ಕಚೇರಿ ಬಳಿ ಕಳೆದ 3 ದಿನಗಳಿಂದಲೂ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿರುವ ಅತಿಥಿ ಬೋಧಕರು ತಮಗೆ ಸೇವಾ ಭದ್ರತೆ ಹಾಗೂ ವಿಲೀನ ಪ್ರಕ್ರಿಯೆಗೆ ಶಾಶ್ವತ ನಿಯಮಾವಳಿ ರೂಪಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷ ಎಚ್.ಕೊಟ್ರೇಶ್ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಜಿಲ್ಲೆಯ 512 ಅತಿಥಿ ಬೋಧಕರು ಅನಿರ್ಧಿಷ್ಟಾವದಿ ಹೋರಾಟ ಆರಂಭಿಸಿ 3 ದಿನಗಳಾಗಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸುಮಾರು 13,500ಕ್ಕೂ ಹೆಚ್ಚು ನೌಕರರು ಹೋರಾಡುತ್ತಿದ್ದಾರೆ. ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2018ವರೆಗೆ ಅತಿಥಿ ಬೋಧಕರಾಗಿ ಆಯ್ಕೆಯಾಗಿ, ಕನಿಷ್ಟ ಗೌರವಕ್ಕೆ ಸೇವೆ ಸಲ್ಲಿಸುತ್ತಾ ಬಂದವರು ನಾವು ಎಂದರು.
ನಿರಂತರ ಹೋರಾಟದ ಫಲವಾಗಿ 4.12.2018ರಂದು ಉನ್ನತ ಶಿಕ್ಷಣ ಸಮಿತಿ ಸಭೆಯಲ್ಲಿ ಅತಿಥಿ ಬೋಧಕರಿಗೆ 25 ಸಾವಿರ ರೂ. ವೇತನ ನೀಡಲು ಪರಿಷತ್ ಸದಸ್ಯರು, ಸಚಿವರು ತೀರ್ಮಾನಿಸಿದ್ದನ್ನು ಆದಷ್ಟು ಬೇಗನೆ ಕಾರ್ಯ ರೂಪಕ್ಕೆ ತರಬೇಕು. ಜೆಓಸಿ ಶಿಕ್ಷಕರನ್ನು ಕಾಯಂಗೊಳಿಸಿದಂತೆ, ದೆಹಲಿ ಮತ್ತು ಇತರೆ ರಾಜ್ಯ ಸರ್ಕಾರಗಳ ಮಾದರಿಯಲ್ಲಿ ಅತಿಥಿ ಬೋಧಕರ ಸೇವೆ ಕಾಯಂಗೆ ಸರಕಾರ ಮುಂದಾಗಲಿ. ಇಲಾಖೆಯಿಂದ ವಿಶೇಷ ನಿಯಮಾವಳಿ ಕುರಿತ ಕಡತವನ್ನು ಅದಿವೇಶನದಲ್ಲಿ, ಸಂಪುಟ ಸಮಿತಿ ಮುಂದೆ ತಂದು, ಅದನ್ನು ಇತ್ಯರ್ಥಪಡಿಸಲಿ ಎಂದು ಅವರು ಒತ್ತಾಯಿಸಿದರು.
ಧರಣಿಯಲ್ಲಿ ಸಮಿತಿಯ ಡಾ.ಕೆ.ಎಂ.ಪ್ರಶಾಂತ ಶರ್ಮ, ಶಿವಕುಮಾರ, ಶಂಕರಯ್ಯ, ಡಾ.ದೇವೇಂದ್ರಪ್ಪ, ಡಾ.ಎಂ.ಪ್ರಭಾಕರ, ಪಿ.ಜಿ.ಮಲ್ಲಿಕಾರ್ಜುನ, ಡಿ.ಪಿ.ಗಂಗಾಧರಮೂರ್ತಿ, ಮಂಜುಳಾ, ಕೆ.ಚಂದ್ರಶೇಖರ, ಡಾ.ಎಂ.ಸುರೇಶ, ಕೆ.ಮೋಹನ, ಸಿ.ರಾಜಕುಮಾರ, ಡಾ.ಬಸವರಾಜ, ಎ.ಕೆ.ಧನಂಜಯ, ಎಂ.ಎಸ್.ಸಂತೋಷ, ಎಂ.ಆರ್.ರಾಘವೇಂದ್ರ, ವಿ.ಹುಲಿಕುಂಟೇಶ್ವರ, ಪಿ.ವಿ.ಸಿದ್ದಮ್ಮ, ಶ್ವೇತಾ, ಡಾ.ಎ.ಎಂ.ಭಾರತಿ, ಕೆ.ಚಂದ್ರಶೇಖರ, ಗಜೇಂದ್ರ, ಟಿ.ಜಿ.ಮಲ್ಲಿಕಾರ್ಜುನ, ಬಿ.ಎಸ್.ಗಣೇಶ, ವೀಣಾ, ಹರಿಹರ ರಾಘವೇಂದ್ರ, ಹರಪನಹಳ್ಳಿ ಡಾ.ವೈ.ಶೇಖರಪ್ಪ, ಜಗಳೂರು ರೂಪಲಕ್ಷ್ಮಿ, ಹೊನ್ನಾಳಿ ಹಳದಪ್ಪ, ಮಾಯಕೊಂಡ ರಂಗನಾಥ, ಚನ್ನಗಿರಿ ಸಂತೋಷ, ನ್ಯಾಮತಿ ಮಲ್ಲಿಕಾರ್ಜುನ, ಬಸವಾಪಟ್ಟಣ ಗೋವಿಂದರೆಡ್ಡಿ, ಸಂತೇಬೆನ್ನೂರು ಜಿ.ನವೀನ ಇದ್ದರು.