ಆರು ತಿಂಗಳ ಒಳಗಾಗಿ ಶಿರಾಡಿ ಘಾಟ್ ರಸ್ತೆ ದುರಸ್ತಿ: ಸಚಿವ ರೇವಣ್ಣ
ಚಳಿಗಾಲದ ಅಧಿವೇಶನ
ಬೆಳಗಾವಿ,ಡಿ.14: ಮುಂದಿನ ಆರು ತಿಂಗಳ ಒಳಗಾಗಿ ಬೆಂಗಳೂರು-ಮಂಗಳೂರು ಮಾರ್ಗದ ಶಿರಾಡಿಘಾಟ್ನ 21 ಕಿಮೀ ರಸ್ತೆಯನ್ನು ದುರಸ್ತಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.
ಶುಕ್ರವಾರ ವಿಧಾನಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕಿ ಡಾ.ತೇಜಸ್ವಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಶಿರಾಡಿಘಾಟ್ ಮಾರ್ಗದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು, ಈ ಸಂಬಂಧ ಕೇಂದ್ರದ ರಸ್ತೆ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಶೀಘ್ರವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದ ಪ್ರಕೃತಿ ವಿಕೋಪದಿಂದಾಗಿ ಕರಾವಳಿ, ಮಲೆನಾಡು ಭಾಗದ ರಸ್ತೆಗಳು ಹಾನಿಗೀಡಾಗಿದ್ದು, ಸದರಿ ರಸ್ತೆಗಳನ್ನು ದುರಸ್ತಿ ಪಡಿಸಲು 1896.13ಕೋಟಿ ರೂ.ಅನುದಾನದ ಅವಶ್ಯಕತೆ ಇದೆ. ಕೊಡುಗು ಭಾಗದಲ್ಲಿ 620 ಕಿಮೀ, ದಕ್ಷಿಣ ಕನ್ನಡ-183.17ಕಿಮೀ, ಉಡುಪಿ-137.99, ಹಾಸನ-329.98ಕಿಮೀ, ಚಿಕ್ಕಮಗಳೂರು-155.05, ಉತ್ತರ ಕನ್ನಡ-135.90 ಹಾಗೂ ರಾಷ್ಟ್ರೀಯ ಹೆದ್ದಾರಿಗಳು-537.52 ಕಿಮೀ ನಷ್ಟು ರಸ್ತೆಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ತಾತ್ಕಾಲಿಕ ದುರಸ್ತಿಗಾಗಿ 50 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, 53 ತಾತ್ಕಾಲಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು 138.67 ಕಿಮೀ ರಸ್ತೆಗಳನ್ನು ದುರಸ್ತಿಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.