ಉಡುಪಿ: ಪ್ರಭಾಕರ ಕಲ್ಯಾಣಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಉಡುಪಿ, ಡಿ.14: ಪೆರ್ಡೂರು ಗ್ರಾಮದ ನಟ, ಹವ್ಯಾಸಿ ರಂಗಭೂಮಿ ಕಲಾವಿದ ಪಿ.ಪ್ರಭಾಕರ ಕಲ್ಯಾಣಿ ಅವರಿಗೆ 2018ನೆ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಸುಮಾರು 400ಕ್ಕೂ ಹೆಚ್ಚು ಕನ್ನಡ, ತುಳು ನಾಟಕದಲ್ಲಿ ಅಭಿನಯಿಸಿ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟ, ಉತ್ತಮ ನಿರ್ದೇಶನ, ಉತ್ತಮ ರಂಗ ಸಜ್ಜಿಕೆ, ಉತ್ತಮ ನಾಟಕ ರಚನೆಗೆ ಬಹುಮಾನ ಪಡೆದಿರುವ ಇವರು, ಕಳೆದ 28 ವರ್ಷಗಳಿಂದ ರಂಗ ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿ ಈವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಮಾಜಿ ಸಂಚಾಲಕರಾಗಿ ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ ಮಾಜಿ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಂಗ ಕಲಾವಿದ ರಾಗಿ ಸನ್ಮಾನ ಮಾಡಲಾಗಿದೆ.
ಬೆಂಗಳೂರು ದೂರದರ್ಶನದ ಚಂದನದಲ್ಲಿ ಬೆಳಗು ಕಾರ್ಯಕ್ರಮದಲ್ಲಿ ರಂಗಭೂಮಿಯ ಕುರಿತ ಇವರ ಕಾರ್ಯಕ್ರಮ ಪ್ರಸಾರಗೊಂಡಿದೆ. ಪ್ರಸ್ತುತ ಇವರು ಕಾರ್ಕಳ ತಾಲೂಕಿನ ದೊಂಡೇರಂಗಡಿ ವಿಜಯಾ ಬ್ಯಾಂಕಿನಲ್ಲಿ ಸಹಾಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.