ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು
ಆರೋಪ ಪಟ್ಟಿ ದಾಖಲಿಸಲು ಸಿಬಿಐ ವಿಫಲ
ಪುಣೆ, ಡಿ. 12: ಸಿಬಿಐ 90 ದಿನಗಳ ಒಳಗೆ ಆರೋಪ ಪಟ್ಟಿ ದಾಖಲಿಸದೇ ಇರುವುದರಿಂದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಪುಣೆ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ದೊರಕಿದ ಆರೋಪಿಗಳು ಅಮೋಲ್ ಕಾಳೆ, ರಾಜೇಶ್ ಬಂಗೇರ ಹಾಗೂ ಅಮಿತ್ ದಿಗ್ವೇಕರ್. ಇವರಲ್ಲಿ ಬಂಗೇರಾ ಹಾಗೂ ದಿಗ್ವೇಕರ್ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಟ್ನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಮೋಲ್ ಕಾಳೆ ಗೋವಿಂದ ಪಾನ್ಸಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್ ಕಸ್ಟಡಿಯಲ್ಲಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಹೆಚ್ಚವರಿ ಆರೋಪ ಪಟ್ಟಿಯನ್ನು ದಾಖಲಿಸಲು ತನಿಖಾ ಸಂಸ್ಥೆ ನ್ಯಾಯಾ ಲಯದಿಂದ ಹೆಚ್ಚುವರಿ ಸಮಯಾವಕಾಶ ಕೋರಿಲ್ಲ ಎಂದು ಪ್ರತಿಪಾದಿಸಿ ಆರೋಪಿಗಳು ಗುರುವಾರ ಜಾಮೀನು ಅರ್ಜಿ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯ ಪ್ರಕರಣದಲ್ಲಿ ಆರೋಪಿಗಳ ಬಂಧನದ 90 ದಿನಗಳ ಒಳಗಡೆ ಆರೋಪ ಪಟ್ಟಿ ದಾಖಲಿಸಬೇಕು. ಅನಂತರ ಗಡುವನ್ನು ವಿಸ್ತರಿಸಲು ಕೋರಬೇಕು.