ಕನ್ನಡ ಶಾಲೆಗಳಿಗೆ ನಿಧಾನ ವಿಷವುಣಿಸುವ ಪ್ರಯತ್ನ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಡಿ.15: ರಾಜ್ಯ ಸರಕಾರವು ಒಂದನೇ ತರಗತಿಯಿಂದಲೇ ಪ್ರಾಯೋಗಿಕವಾಗಿ ಆಂಗ್ಲ ಮಾಧ್ಯಮವನ್ನು ಅಳವಡಿಸುವ ನಿರ್ಧಾರ ಮಾಡಿರುವುದು, ಕನ್ನಡ ಶಾಲೆಗಳಿಗೆ ನಿಧಾನವಾಗಿ ವಿಷವುಣಿಸುವ ಪ್ರಯತ್ನವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿರಿಯ ಪ್ರಾಥಮಿಕ ಹಂತದಲ್ಲಿ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ ಮತ್ತು ಒಂದನೆ ತರಗತಿಯಿಂದಲೇ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸುವ ನೀತಿಯು ವೈಜ್ಞಾನಿಕವಾಗಿದ್ದು, ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರವು ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಅಳವಡಿಸಿದಾಗ ಮರಾಠಿ ಮಾಧ್ಯಮದ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದವು. ಆಗ ಹದಿಮೂರು ತಜ್ಞರುಳ್ಳ ಸಮಿತಿಯನ್ನು ರಚಿಸಿ ಅಧ್ಯಯನ ಮಾಡಿಸಲಾಯಿತು. ಈ ಸಮಿತಿಯ ಶಿಫಾರಸ್ಸಿನಂತೆ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸುವ ನೀತಿಯನ್ನು ಜಾರಿಗೆ ತರಲಾಯಿತು ಎಂದು ಅವರು ಹೇಳಿದ್ದಾರೆ.
ಜೊತೆಗೆ, ಅವರವರ ಮಾತೃಭಾಷೆ ಕಲಿಯುವ ಅವಕಾಶವನ್ನು ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು. ಈಗ ಅಲ್ಲಿ ಮರಾಠಿ ಶಾಲೆಗಳು ಸದೃಢವಾಗಿವೆ. ಈ ಅಂಶವನ್ನು ಗಮನಿಸಬೇಕು. ಕರ್ನಾಟಕದಲ್ಲಿ ಅಧ್ಯಾಪಕರ ಆಸಕ್ತಿಯಿಂದ ಅದ್ಭುತವಾಗಿ ಬೆಳೆದ ಕನ್ನಡ ಶಾಲೆಗಳಿದ್ದು, ಅವುಗಳ ಅಭಿವೃದ್ಧಿ ಅಂಶಗಳನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಯಾವುದೇ ಸಕಾರಾತ್ಮಕ ಅಧ್ಯಯನ ಮಾಡದೆ ಅಧಿಕಾರಿಗಳ ಅಭಿಪ್ರಾಯವೇ ಅಂತಿಮವೆಂದು ತಿಳಿದು ಸಲ್ಲದ ಪ್ರಯೋಗಗಳಿಗೆ ಮುಂದಾಗುವುದು, ಪ್ರಜಾಸತ್ತಾತ್ಮಕ ಸರಕಾರದ ಲಕ್ಷಣವಲ್ಲ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿದ ಅಧ್ಯಾಪಕರ ಆಲೋಚನೆ ಮತ್ತು ಅನುಷ್ಠಾನ ಕ್ರಮಗಳನ್ನು ಉನ್ನತ ಅಧಿಕಾರಿಗಳು ಮತ್ತು ಸರಕಾರ ಮೊದಲಿಗೆ ತಿಳಿದುಕೊಳ್ಳಬೇಕು ಎಂದು ಅವರು ಬರಗೂರು ರಾಮಚಂದ್ರಪ್ಪ ಕೋರಿದ್ದಾರೆ.
ತಜ್ಞರ ಅಭಿಪ್ರಾಯ ಕೇಳಬೇಕು. ಆಯಾ ರಾಜ್ಯ ಭಾಷೆ ಮತ್ತು ಮಾತೃ ಭಾಷೆ ಶಾಲೆಗಳನ್ನು ಉಳಿಸಿ ಬೆಳೆಸಿದ ರಾಜ್ಯಗಳ ಅನುಭವವನ್ನು ಅರಿಯಬೇಕು. ಇದ್ಯಾವುದನ್ನೂ ಮಾಡದೆ ಪ್ರಾಥಮಿಕ ಶಿಕ್ಷಣವನ್ನು ಪ್ರಯೋಗ ಬಲಿಗಳ ತಾಣವಾಗಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಕನ್ನಡ ಅಥವಾ ಮಾತೃಭಾಷಾ ಶಿಕ್ಷಣವು ಕೇವಲ ಶೈಕ್ಷಣಿಕ ಪ್ರಶ್ನೆಯಲ್ಲ, ಸಾಂಸ್ಕೃತಿಕ ಪರಿಣಾಮದ ಪ್ರಶ್ನೆಯೂ ಹೌದು. ಕನ್ನಡ ಅಥವಾ ಮಾತೃಭಾಷಾ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಹಂತದಲ್ಲೇ ಕೊಂದು ಹಾಕಿದರೆ ಮುಂದೆ ಕನ್ನಡ ಪತ್ರಿಕೆ, ಪುಸ್ತಕ, ಸಿನಿಮಾ, ನಾಟಕಗಳ ಅಭಿರುಚಿಯನ್ನೆ ಹಾಳು ಮಾಡಿದಂತಾಗುತ್ತದೆ. ರಾಜ್ಯ ಸರಕಾರವು ಕೂಡಲೇ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದು, ಕನ್ನಡ ಶಾಲಾ ಪರವಾದ ಸಕಾರಾತ್ಮಕ ನಿಲುವನ್ನು ಪ್ರಕಟಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.