ಟಿಕೆಟ್ ನೀಡಲು ಹೈಕಮಾಂಡ್ಗೆ ಮನವಿ: ಐವನ್ ಡಿಸೋಜ
ಲೋಕಸಭಾ ಚುನಾವಣೆ
ಮಂಗಳೂರು, ಡಿ.15: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಆಸಕ್ತಿ ಹೊಂದಿದ್ದು, ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದೇನೆ. ಟಿಕೆಟ್ ನೀಡುವ ನಿರೀಕ್ಷೆಯೂ ಇದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ಶನಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ದ.ಕ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಕ್ರೈಸ್ತ ಸಮುದಾಯವೂ ಬಹುದೊಡ್ಡ ಸಂಖ್ಯೆಯಲ್ಲಿದೆ. ಈ ಹಿನ್ನೆಲೆಯಲ್ಲಿ ತನಗೆ ಟಿಕೆಟ್ ನೀಡಬಹುದು ಎಂಬ ವಿಶ್ವಾಸವಿದೆ. ಟಿಕೆಟ್ ನೀಡಿದರೆ ಖಂಡಿತವಾಗಿಯೂ ಗೆಲ್ಲುವ ವಿಶ್ವಾಸವಿದೆ. ಆದಾಗ್ಯೂ ಹೈಕಮಾಂಡ್ನ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಪೂಜಾರಿಗೂ ಟಿಕೆಟ್ ಕೇಳುವ ಹಕ್ಕಿದೆ: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಇತ್ತೀಚೆಗೆ ‘ತಾನೂ ಸ್ಪರ್ಧಿಸಲು ಉತ್ಸುಕನಾಗಿರುವುದಾಗಿ ಹೇಳಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪೂಜಾರಿಗೂ ಟಿಕೆಟ್ ಕೇಳುವ ಎಲ್ಲ ಹಕ್ಕುಗಳಿವೆ ಎಂದು ಐವನ್ ಡಿಸೋಜ ಪ್ರತಿಕ್ರಿಯಿಸಿದರು.
ಅಧಿವೇಶನದಲ್ಲಿ ಮರಳು ಸಮಸ್ಯೆ ಬಗ್ಗೆ ಚರ್ಚೆ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಸೋಮವಾರ ಕರಾವಳಿಯ ಮರಳು ಸಮಸ್ಯೆ, ಮರಳು ದರ ನಿಗದಿ ಕುರಿತು ಚರ್ಚೆ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ 25 ಮರಳು ದಿಬ್ಬಗಳನ್ನು ಗುರುತಿಸಿದ್ದರೂ ಕೇವಲ 12 ದಿಬ್ಬ ತೆರವಿಗೆ ಮಾತ್ರ ಅವಕಾಶ ಒದಗಿಸಲಾಗಿದೆ. ಪರ್ಮಿಟ್ ತೆಗೆದುಕೊಂಡವರು ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಮರಳುಗಾರಿಕೆಗೆ ಪರ್ಮಿಟ್ ನೀಡುವ ಮೊದಲು ಲೋಡ್ ಮರಳು ರಾತ್ರೋರಾತ್ರಿ 10 ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿತ್ತು. ಪರ್ಮಿಟ್ ನೀಡಿದ ಮೇಲೂ ಬೆಲೆ ಇನ್ನಷ್ಟು ಏರಿಕೆಯಾಗಿದೆಯೇ ಹೊರತು ಜನಸಾಮಾನ್ಯರಿಗೆ ದೊರಕುತ್ತಿಲ್ಲ. ಜಿಲ್ಲೆಯಲ್ಲಿ ಯಾವ ಕಾಮಗಾರಿಗಳನ್ನೂ ಇದರಿಂದ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸೋಮವಾರ ಅಧಿವೇಶನದಲ್ಲಿ ಈ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಐವನ್ ಡಿಸೋಜ ತಿಳಿಸಿದರು.
ರಾಜ್ಯದ 19 ವಿವಿಗಳಲ್ಲಿ ಮಂಗಳೂರು ವಿವಿ ಮಾತ್ರ ಕ್ರೀಡಾ ನೀತಿ ಜಾರಿಗೊಳಿಸಲಾಗಿದೆ. ಉಳಿದ 18 ಜಿಲ್ಲೆಗಳಲ್ಲೂ ಜಾರಿಗೊಳಿಸಬೇಕು ಎಂಬ ತನ್ನ ಒತ್ತಾಯಕ್ಕೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಐವನ್ ಹೇಳಿದರು.
ಕೊಲೆಗೀಡಾದ ಕುಟುಂಬಕ್ಕೆ ಪರಿಹಾರ: ಸಾಮಾನ್ಯವಾಗಿ ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಯ ಪರಿಹಾರ ಸಿಗುವುದಿಲ್ಲ. ಆದರೆ ಕೆಲ ತಿಂಗಳ ಹಿಂದೆ ಬೊಕ್ಕಪಟ್ಣ ಬೆಂಗ್ರೆಯಲ್ಲಿ ಮನೆ ಟೆರೇಸ್ ಮೇಲೆ ಮಲಗಿದ್ದ ಶಿವರಾಜ್ ಎಂಬವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದರು. ಮನೆ ಟೆರೇಸ್ ಮೇಲೆ ಸದಾ ಮಲಗುತ್ತಿದ್ದ ಶಿವರಾಜ್ ಅವರ ತಮ್ಮನನ್ನು ಕೊಲೆ ಮಾಡುವ ಉದ್ದೇಶ ದುಷ್ಕರ್ಮಿಗಳದ್ದಾಗಿತ್ತು. ಆದರೆ ಘಟನೆ ನಡೆದ ದಿನ ತಮ್ಮನ ಬದಲು ಶಿವರಾಜ್ ಟೆರೇಸ್ ಮೇಲೆ ಮಲಗಿದ್ದರಿಂದ ಅನಿರೀಕ್ಷಿತವಾಗಿ ಕೊಲೆಯಾಗಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಅಮಾಯಕ ವ್ಯಕ್ತಿಯ ಬಲಿಯಾಗಿ ಕುಟುಂಬ ಕಂಗೆಟ್ಟಿತ್ತು. ಈ ಬಡ ಕುಟುಂಬಕ್ಕೆ ಸಿಎಂ ವಿಶೇಷ ಪರಿಹಾರ ನಿಧಿ ಒದಗಿಸಲು ಮುಂದಾದಾಗ ಕೊಲೆ ಪ್ರಕರಣಕ್ಕೆ ಪರಿಹಾರ ನೀಡಲಾಗದು ಎಂದು ಅಧಿಕಾರಿಗಳು ಹೇಳಿದ್ದರು. ಕೊನೆಗೆ ಈಗಿನ ಮುಖ್ಯಮಂತ್ರಿಯನ್ನು ಭೇಟಿಯಾಗಿ ಪ್ರಕರಣ ವಿಶೇಷ ಸ್ವರೂಪದ್ದಾಗಿರುವುದರಿಂದ ಹಾಗೂ ಅಮಾಯಕನ ಬಲಿಯಾಗಿದ್ದರಿಂದ ಪರಿಹಾರ ಒದಗಿಸಲು ಮನವಿ ಮಾಡಿದ್ದೆ. ಕೂಡಲೆ ಸಿಎಂ 2 ಲಕ್ಷ ರೂ.ಚೆಕ್ ನೀಡಿದ್ದಾರೆ ಎಂದು ಐವನ್ ಡಿಸೋಜ ತಿಳಿಸಿದರಲ್ಲದೆ ಪರಿಹಾರದ ಚೆಕ್ನ್ನು ತನ್ನ ಕಚೇರಿಯಲ್ಲಿ ಶಿವರಾಜ್ರ ತಾಯಿ ವಾರಿಜಾಗೆ ಹಸ್ತಾಂತರಿಸಿದರು.
ಡಿ.23ರಂದು ಸೌಹಾರ್ದ ಕ್ರಿಸ್ಮಸ್ ಆಚರಣೆ
ಭಾವೈಕ್ಯತೆಯ ದೀಪಾವಳಿ, ಇಫ್ತಾರ್ ಸೌಹಾರ್ದ ಕೂಟ ಆಯೋಜಿಸಿಕೊಂಡು ಬರುತ್ತಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ 3ನೇ ವರ್ಷದ ಭಾವೈಕ್ಯತೆಯ ಕ್ರಿಸ್ಮಸ್ ಸಂಭ್ರಮಾಚರಣೆ ಡಿ.23ರಂದು ಅಪರಾಹ್ನ 3:30ರಿಂದ ಕಂಕನಾಡಿ ಮಾರುಕಟ್ಟೆಯ ಸಾರ್ವಜನಿಕ ಮೈದಾನದಲ್ಲಿ ನಡೆಯಲಿದೆ.
ಹಬ್ಬದ ಪ್ರಯುಕ್ತ ನಾಡಿನ ಸರ್ವ ಧರ್ಮದವರನ್ನು ಒಗ್ಗೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಅದಕ್ಕಾಗಿ 80 ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಒಂದು ಸಾವಿರ ಮಂದಿಗೆ ಸೀರೆ ವಿತರಿಸಲಾಗುವುದು ಎಂದು ಐವನ್ ಡಿಸೋಜ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಸ್ಪರ್ಧೆ: ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಹಬ್ಬದ ಸಂದೇಶ ಸಾರುವ ಕ್ಯಾರಲ್ ಸ್ಪರ್ಧೆ, ನಕ್ಷತ್ರ ಸ್ಪರ್ಧೆ, ಕ್ರಿಸ್ಮಸ್ ಕೇಕ್ ಪ್ರದರ್ಶನ ಹಾಗೂ ಸ್ಪರ್ಧೆ, ಸಾಂತಾಕ್ಲಾಸ್ ಸ್ಪರ್ಧೆಗಳು ನಡೆಯಲಿದೆ. ಇದರಲ್ಲಿ ಭಾಗವಹಿಸಲು ನಗರದ ಎಲ್ಲ ಚರ್ಚ್ಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಆಹ್ವಾನಪತ್ರ ನೀಡಲಾಗಿದೆ. ಸ್ಪರ್ಧೆಗಳಲ್ಲಿ ವಿಜೇತರಿಗೆ ನಗದು ಬಹುಮಾನ ಮತ್ತು ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಂದು ಮಧ್ಯಾಹ್ನ 3:30ಕ್ಕೆ ಕ್ರಿಸ್ಮಸ್ ಕ್ಯಾರಲ್ ಸಂಗೀತ ಸ್ಪರ್ಧೆಗೆ ಮಾಜಿ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಲಿದ್ದಾರೆ. ಕ್ರಿಸ್ಮಸ್ ಕೇಕ್ ಸ್ಪರ್ಧೆಗೆ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಕ್ಷತ್ರ ಸ್ಪರ್ಧೆಗೆ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿಸೋಜ, ಸಾಂತಾಕ್ಲಾಸ್ ಸ್ಪರ್ಧೆಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಚಾಲನೆ ನೀಡಲಿದ್ದಾರೆ ಎಂದರು.
ಧಾರ್ಮಿಕ ಸಭೆ: ಸಂಜೆ 6:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಮಾರು ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಧರ್ಮಗುರು ಎಲ್. ಮ್ಯಾಕ್ಸಿಂ ನೊರೋನ್ಹ ಭಾಗವಹಿಸಲಿದ್ದಾರೆ. ಮೇಯರ್ ಭಾಸ್ಕರ ಮೊಯ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ ಫಲಾನುಭವಿಗಳಿಗೆ ಸೀರೆ ವಿತರಿಸಲಿದ್ದಾರೆ. ರಾತ್ರಿ 7:30ರಿಂದ ಸಂಗೀತ ರಸಮಂಜರಿ ಆಯೋಜಿಸಲಾಗಿದೆ ಎಂದು ಐವನ್ ಹೇಳಿದರು.