ಯಮನ್: ಮುರಿದ ಕದನ ವಿರಾಮ
ಹುದೈದಾಲ್ಲಿ ಭೀಕರ ಸಂಘರ್ಷ: ಭಾರೀ ಸಾವು-ನೋವು
ದುಬೈ, ಡಿ.16: ವಿಶ್ವಸಂಸ್ಥೆಯ ಶಾಂತಿ ಸಂಧಾನದ ಬಳಿಕ ಕದನವಿರಾಮ ಏರ್ಪಟ್ಟ ಹೊರತಾಗಿಯೂ ಯಮನ್ನ ಬಂಡುಕೋರರ ವಶದಲ್ಲಿರುವ ಬಂದರು ನಗರ ಹುದೈದಾದ ಹೊರವಲಯದಲ್ಲಿ ರವಿವಾರ ಭಾರೀ ಘರ್ಷಣೆ ಹಾಗೂ ವಾಯುದಾಳಿ ನಡೆದಿರುವುದಾಗಿ ಸರಕಾರಿ ಪರ ಮೂಲಗಳು ಹಾಗೂ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಹುದೈದಾ ಪ್ರಾಂತದಲ್ಲಿ ಶನಿವಾರ ರಾತ್ರಿ ನಡೆದ ಘರ್ಷಣೆ ಹಾಗೂ ವಾಯುದಾಳಿಗಳಲ್ಲಿ 22 ಬಂಡುಕೋರರು ಸೇರಿದಂತೆ ಕನಿಷ್ಠ 29 ಮಂದಿ ಸಾವನ್ನಪ್ಪಿದ್ದಾರೆ.
ಈ ಮಧ್ಯೆ ಹುದೈದಾ ನಗರ ಸಮೀಪದ ಅಲ್ದುರಿಹಿಮಿ ಜಿಲ್ಲೆಯಲ್ಲಿ ಸರಕಾರಿ ಪಡೆಗಳು ಪಡೆಗಳು ಮಿಂಚಿನ ದಾಳಿ ನಡೆಸಿ, ಏಳು ಮಂದಿ ಬಂಡುಕೋರರನ್ನು ಬಂಧಿಸಿದ್ದಾರೆ. ವಿಶ್ವಸಂಸ್ಥೆ ಬೆಂಬಲಿತ ಕದನವಿರಾಮ ಜಾರಿಗೆ ಬಂದ ಕೆಲವೇ ದಿನಗಳ ಬಳಿಕ ಸರಕಾರಿ ಪಡೆಗಳು ಹಾಗೂ ಹುದಿ ನೇತೃತ್ವದ ಬಂಡುಕೋರರ ನಡುವೆ ಭೀಕರ ಕದನ ಮತ್ತೆ ಭುಗಿಲೆದ್ದಿದೆ.
ಹುದೈದಾ ನಗರದ ವಸತಿ ಪ್ರದೇಶಗಳಲ್ಲಿ ಸರಕಾರಿ ಪರ ಪಡೆಗಳು ಭೀಕರ ಶೆಲ್ ದಾಳಿ ನಡೆಸಿದ್ದು, ಹಲವಾರು ನಾಗರಿಕರ ಸಾವುನೋವು ಸಂಭವಿಸಿರುವುದಾಗಿ ಹುದಿ ಬಂಡುಕೋರರು ಆರೋಪಿಸಿದ್ದಾರೆ.
Next Story