ರಾಜಸಮಂದ್ ಹತ್ಯೆ ಪ್ರಕರಣ: ವಿವರಣೆ ನೀಡುವಂತೆ ರಾಜಸ್ಥಾನ ಸರಕಾರಕ್ಕೆ ಸುಪ್ರೀಂ ಸೂಚನೆ
ಜೈಲಿನಿಂದಲೇ ವೀಡಿಯೊ ಅಪ್ಲೋಡ್ ಮಾಡಿದ ಆರೋಪಿ
ನಿರ್ದೇಶ ಜೈಪುರ, ಡಿ. 17: ಕಳೆದ ವರ್ಷ ನಡೆದ ಮುಸ್ಲಿಂ ಕಾರ್ಮಿಕನ ಹತ್ಯೆ ಪ್ರಕರಣದ ಆರೋಪಿ ಶಂಭುಲಾಲ್ ರೆಗಾರ್ ಜೋಧ್ಪುರ ಜೈಲಿನ ಒಳಗಡೆಯಿಂದ ಆನ್ಲೈನ್ನಲ್ಲಿ ವೀಡಿಯೊ ಅಪ್ ಲೋಡ್ ಮಾಡಿರುವುದು ಹೇಗೆ ಎಂಬುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ರಾಜಸ್ಥಾನ ಸರಕಾರವನ್ನು ಪ್ರಶ್ನಿಸಿದೆ.
ರೆಗಾರ್ ಅನ್ನು ದಿಲ್ಲಿಯ ತಿಹಾರ್ ಜೈಲಿಗೆ ವರ್ಗಾಯಿಸುವಂತೆ ಕೋರಿ ಕಾರ್ಮಿಕನ ಪತ್ನಿ ದಾಖಲಿಸಿದ ಮನವಿಗೆ ಪ್ರತಿಕ್ರಿಯಿಸುವಂತೆ ನಿರ್ದೇಶಿಸಿ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ಎಂ.ಆರ್. ಶಾ ಅವರನ್ನು ಒಳಗೊಂಡ ಪೀಠ ರೆಗಾರ್ಗೆ ನೋಟಿಸು ಜಾರಿ ಮಾಡಿತ್ತು. 2017 ಡಿಸೆಂಬರ್ನಲ್ಲಿ ರಾಜಸಮಂದ್ನಲ್ಲಿ ರೆಗಾರ್ನಿಂದ ಹತ್ಯೆಗೀಡಾದ ಹೇಳಲಾದ ಮುಹಮ್ಮದ್ ಅಫ್ರಝುಲ್ ಅವರ ಪತ್ನಿ ಗುಲ್ಬಹಾರ್ ಬೀಬಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಬೀಬಿ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಇಂದಿರಾ ಜೈಸಿಂಗ್, ರೆಗಾರ್ ಆ ವೀಡಿಯೊವನ್ನು ಇಂಟರ್ನೆಟ್ನಲ್ಲಿ ನಿರಂತರ ಅಪ್ಲೋಡ್ ಮಾಡುತ್ತಿದ್ದಾನೆ ಎಂದರು.
ರಾಜಸ್ಥಾನದ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ವೀಡಿಯೊವನ್ನು ಅಳಿಸಲಾಗಿದೆ ಎಂದರು. ರೆಗಾರ್ ಅಪ್ಲೋಡ್ ಮಾಡಿದ ವೀಡಿಯೊ ಈಗಲೂ ಆನ್ಲೈನ್ನಲ್ಲಿ ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಪೀಠ ರಾಜ್ಯ ಸರಕಾರಕ್ಕೆ ಸೂಚಿಸಿತು. ಪೀಠ ಈ ಪ್ರಕರಣದ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.