ಉದ್ಯೋಗ ಖಾತರಿ ಯೋಜನೆಯಲ್ಲಿ ಗದ್ದೆ ಕೃಷಿಗೆ ಅವಕಾಶ ನೀಡಲಿ: ಭತ್ತದ ಉತ್ಸಾಹಿ ರೈತ ಬಿಇ ಪದವೀಧರ ದೇವರಾವ್
ಇಂದು ಕಿಸಾನ್ ದಿನ
ಇಂದು ಕಿಸಾನ್ ದಿನ : ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ರೈತರನ್ನು ಪತ್ರಿಕೆ ಸಂದರ್ಶನ ಮಾಡಿದೆ. ಅವರ ಸಾಧನೆ, ಕೃಷಿಯ ಅನುಭವಗಳು, ಎದುರಿಸುತ್ತಿರುವ ಸವಾಲು, ಕೃಷಿಯ ಮೂಲಕ ಅವರು ಕಟ್ಟಿಕೊಂಡಿರುವ ಬದುಕನ್ನು ರೈತರು ಹಂಚಿಕೊಂಡಿದ್ದಾರೆ.
ಭತ್ತದ ತಳಿಗಳ ಸಂರಕ್ಷಣೆಯ ಮೂಲಕ ದೇಶದ ಗಮನಸೆಳೆದಿರುವ ಹಿರಿಯ ರೈತ ಬಿ.ಕೆ.ದೇವರಾವ್ ಅವರ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಅವರ ಪುತ್ರ ಬಿ.ಕೆ.ಪರಮೇಶ್ವರ ರಾವ್. ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿಯಾಗಿರುವ ಅವರು ಬಿಇ ಪದವೀಧರ. ಬೆಂಗಳೂರಿನ ಬಿಎಚ್ಇ ಎಲ್ ಕಂಪೆನಿಯಲ್ಲಿ ಇದ್ದ ಉದ್ಯೋಗವನ್ನು ತೊರೆದು ಮೂರು ದಶಕಗಳ ಹಿಂದೆ ಹಳ್ಳಿಗೆ ಆಗಮಿಸಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ತಮ್ಮದೇ ಆದ ಚಿಂತನೆಗಳನ್ನು ಇಟ್ಟುಕೊಂಡು ಕೃಷಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಯುವ ಸಮುದಾಯಕ್ಕೆ ಸದಾ ಪ್ರೇರಕರಾಗಿದ್ದಾರೆ. ಇವರ ಕುಟುಂಬದಲ್ಲಿ ಸುಮಾರು 160ಕ್ಕಿಂತಲೂ ಹೆಚ್ಚು ಭತ್ತದ ತಳಿಗಳಿದ್ದು, ಅವೆಲ್ಲವನ್ನೂ ಈಗಲೂ ಕೃಷಿ ಮಾಡುತ್ತಾ ಉಳಿಸಿಕೊಂಡು ಬಂದಿದ್ದಾರೆ. ಹತ್ತಾರು ಬಗೆಯ ಮಾವು, ಹಲಸುಗಳು ಇಲ್ಲಿವೆ. ತಂದೆಯೊಂದಿಗೆ ಸೇರಿ ಕೃಷಿ ಮಾಡುತ್ತಿರುವ ಪರಮೇಶ್ವರ ರಾವ್ ಅವರನ್ನು ಮಾತನಾಡಿಸಿದಾಗ.
► ನೀವು ಕೃಷಿ ಕ್ಷೇತ್ರವನ್ನು ಆಯ್ದುಕೊಳ್ಳಲು ಕಾರಣವೇನು?
ನಮ್ಮದು ಕೃಷಿಕ ಕುಟುಂಬ. ಕಲಿತು ಬೆಂಗಳೂರಿಗೆ ಹೋಗಿ ಉದ್ಯೋಗ ಗಳಿಸಿದರೂ ಮನಸ್ಸು ಹಳ್ಳಿಯತ್ತ ಸೆಳೆಯಿತು. ಕುಟುಂಬಕ್ಕೆ ಉತ್ತಮವಾದ ಕೃಷಿ ಭೂಮಿಯಿದ್ದು, ನೀರು ಸೇರಿದಂತೆ ಎಲ್ಲ ಸೌಲಭ್ಯಗಳೂ ಇದ್ದವು. ತಂದೆ ಮಾಡಿಕೊಂಡು ಬಂದಿದ್ದ ಕೃಷಿಯನ್ನು ಅವರ ಮಾರ್ಗದರ್ಶನದಲ್ಲೇ ಮುಂದುವರಿಸಿದೆ. ಎಷ್ಟು ಬೆಳೆಯುತ್ತೇನೆ ಎಂಬುದಕ್ಕಿಂತಲೂ ವಿಷಮುಕ್ತ ಆಹಾರ ಬೆಳೆಯಬೇಕು ಎಂಬ ಗುರಿಯೊಂದಿಗೆ ಭತ್ತ ಸೇರಿದಂತೆ ಆಹಾರಗಳನ್ನು ಬೆಳೆಯುತ್ತಿದ್ದೇನೆ.
► ಸಾವಯವ ಕೃಷಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
1988ರಿಂದ ಸಾವಯವ ಕೃಷಿ ಮಾಡುತ್ತಾ ಬಂದಿದ್ದೇನೆ. ಇದುವರೆಗೂ ಯಾವುದೇ ರಾಸಾಯನಿಕಗಳನ್ನು ಬಳಸಿಲ್ಲ. ಹಾಗಂತ ಸಾವಯವದ ಹೆಸರಲ್ಲಿ ಬರುವ ಯಾವುದೇ ಗೊಬ್ಬರಗಳನ್ನು ಉಪಯೋಗಿಸುತ್ತಿಲ್ಲ. ಮನೆಯಲ್ಲಿರುವ ಹಟ್ಟಿಯ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದೇವೆ. ಈ ಗೋಕೇಂದ್ರೀಕೃತ ಕೃಷಿಯಿಂದ ಯಾುದೇ ನಷ್ಟವಾಗಿಲ್ಲ.
► ಸಾಲ ಹಾಗೂ ಕೃಷಿಕರ ಆತ್ಮಹತ್ಯೆ ಬಗ್ಗೆ.
ಸಾಲ ನೀಡುವ ಮತ್ತು ಅದನ್ನು ಪಡೆದವರು ಉಪಯೋಗಿಸುವ ರೀತಿಯ ಅಂತಿಮ ಫಲಿತಾಂಶವೇ ರೈತರ ಆತ್ಮಹತ್ಯೆ. ಸರಕಾರಗಳು ಹಣಕಾಸು ಸಂಸ್ಥೆಗಳು ಕೃಷಿಕರಿಗೆ ಸಾಲವನ್ನು ನೀಡುತ್ತಿದೆ. ಅದರ ಬಡ್ಡಿ ಪಾವತಿಸುವಷ್ಟು ಕೃಷಿಕರಿಗೆ ಆದಾಯ ಬರುತ್ತಿಲ್ಲ. ಇಲ್ಲಿ ಕೇವಲ ಸಾಲದ ಬಡ್ಡಿಯ ವಿಚಾರ ಮಾತ್ರವಲ್ಲ ಅದಕ್ಕಾಗಿನ ಅಲೆದಾಟ, ಖರ್ಚು ಎಲ್ಲವೂ ಸೇರಿದಾಗ ರೈತರಿಗೆ ತಾಳಿಕೊಳ್ಳುವ ಶಕ್ತಿಯಿರುವುದಿಲ್ಲ. ಅದರೊಂದಿಗೆ ಸಾಲದ ದುರ್ಬಳಕೆಯೂ ಆಗುವಾಗ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಬೆಳೆದ ಬೆಳೆಗೆ ಸರಿಯಾದ ಬೆಲೆಯೂ ಇಲ್ಲವಾದಾಗ ಆತ್ಮಹತ್ಯೆಗಳು ಸಂಭವಿಸುತ್ತದೆ. ಸರಕಾರಗಳು ಸಾಲಮನ್ನಾಕ್ಕೆ ನೀಡುವುದಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಕೃಷಿಕರ ಬೆಳೆಗೆ ಸರಿಯಾದ ಬೆಲೆ ಒದಗಿಸಲು ಪ್ರಯತ್ನಿಸಬೇಕಾಗಿದೆ. ಆಗ ಮಾತ್ರ ರೈತರ ಉಳಿವು ಸಾಧ್ಯ.
► ಸರಕಾರ ಕೃಷಿಕರಿಗಾಗಿ ಏನು ಮಾಡಬೇಕು ಎಂದು ಬಯಸುತ್ತೀರಾ?
ಸರಕಾರ ಕೃಷಿಕರನ್ನು ಸಶಕ್ತರನ್ನಾಗಿಸಬೇಕು, ಕೃಷಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಬೇಕು. ಅದರಲ್ಲಿಯೂ ಆಹಾರ ಬೆಳೆಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಗದ್ದೆ ಕೃಷಿಗೆ ಅವಕಾಶ ನೀಡಬೇಕು. ನಿರಿಂಗಿಸುವುದಕ್ಕಾಗಿ ಇಂಗುಗುಂಡಿ ಮಾಡುವುದಕ್ಕಿಂತಲೂ ಗದ್ದೆಗಳನ್ನು ಉಳಿಸಲು ನೋಡಬೇಕು. ನಗರ ಕೇಂದ್ರೀಕೃತವಾದ ವ್ಯವಸ್ಥೆಯನ್ನು ಬದಲಿಸುವ ಕಾರ್ಯ ಮಾಡಬೇಕು. ಹಳ್ಳಿಯೇ ಆರ್ಥಿಕೆಯ ಕೇಂದ್ರವಾದರೆ ಸಮಸ್ಯೆಗಳು ತನ್ನಿಂತಾನೆ ಪರಿಹಾರವಾಗುತ್ತದೆ. ರೈತರಿಗೆ ಸಾಲನೀಡುವ ಬಗ್ಗೆ ಮತ್ತು ಬೆಳೆಗೆ ಬೆಲೆ ನಿಗದಿಪಡಿಸುವ ವಿಚಾರದಲ್ಲಿ ಮರು ಚಿಂತನೆಗಳು ನಡೆಯಬೇಕಾಗಿದೆ. ಇಷ್ಟು ಮಾಡಿದರೆ ರೈತರು ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಡೆಯಬಹುದು.
► ಸಬ್ಸಿಡಿ ವ್ಯವಸ್ಥೆಯ ಬಗ್ಗೆ ನಿಮ್ಮ ಅನಿಸಿಕೆ?
ಸರಕಾರಗಳು ಕೃಷಿಕರಿಗೆಂದು ರೂಪಿಸಿರುವ ಯೋಜನೆಗಳು ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಈಗ ಯಂತ್ರೋಪಕರಣಗಳ ಖರೀದಿಗೆ ನೀಡುತ್ತಿರುವ ಸಬ್ಸಿಡಿಯನ್ನು ಗಮನಿಸಿ ಅಲ್ಲಿ ಉಪಕರಣಗಳ ಬೆಲೆ ಮತ್ತು ಸಬ್ಸಿಡಿ ತಾಳೆಯಾಗುವುದೇ ಇಲ್ಲ, ಸರಕಾರದ ಹಣ ಯಾರದೋ ಪಾಲಾಗುತ್ತಿರುವಂತೆ ಕಾಣುತ್ತಿದೆ. ಇದರ ಬಗ್ಗೆ ಪರಿಶೀಲನೆಗಳು ನಡೆಯಲಿ, ರೈತರಿಗೆ ಯಾವರೀತಿ ನೆರವಾಗಬಹುದು ಎಂಬ ಬಗ್ಗೆ ಹೊಸ ಚಿಂತನೆಗನ್ನು ನಡೆಸಲು ಇದು ಸಕಾಲವಾಗಿದೆ.
► ಕೃಷಿ ನಿಮಗೆ ಸಂತೃಪ್ತಿ ನೀಡಿದೆಯೇ?, ಅದರಿಂದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆಯೇ?
ಕೃಷಿ ನನಗೆ ಸಂಪೂರ್ಣ ಸಂತೃಪ್ತಿಯನ್ನು ನೀಡಿದೆ. ಕೇವಲ ಹಣ ಗಳಿಕೆಯೊಂದೆ ಉದ್ದೇಶವಾಗಿ ಇಟ್ಟುಕೊಂಡು ಕೃಷಿಯನ್ನು ಮಾಡುತ್ತಾ ಬಂದಿಲ್ಲ. ಹಾಗಂತ ಬದುಕಲು ಅಗತ್ಯವಾದುದನ್ನು ಕೃಷಿಯಿಂದಲೇ ಪಡೆಯುತ್ತಿದ್ದೇವೆ. ಅದು ಜೀವನದ ಭಾಗವಾಗಿಯೇ ಇದೆ ಅದರಿಂದಾಗಿ ಕೃಷಿಯಲ್ಲಿ ಆತ್ಮಸಂೃಪ್ತಿಯನ್ನು ಪಡೆಯಲು ಸಾಧ್ಯವಾಗಿದೆ.
► ಮುಂದಿನ ಪೀಳಿಗೆ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದೆಯೇ?
ಯಾವೆಲ್ಲ ಆವಿಷ್ಕಾರಗಳು ತಂತ್ರಜ್ಞಾನಗಳು ಬಂದರೂ ಆಹಾರದ ಹೊರತಾಗಿ ಮಾನವ ಜೀವನ ಅಸಾಧ್ಯ, ಆದ್ದರಿಂದ ಕೃಷಿ ಉಳಿಯಲೇಬೇಕು. ಯುವ ಸಮುದಾಯ ಕೃಷಿಯತ್ತ ಬರಬೇಕಾದರೆ ನಮ್ಮ ಶಿಕ್ಷಣದಲ್ಲಿ ಬದಲಾವಣೆಗಳಾಗಬೇಕಿದೆ. ಈಗ ಎಲ್ಲಿಯೂ ಬದುಕುವ ಶಿಕ್ಷಣ ಸಿಗುತ್ತಿಲ್ಲ, ಈಗ ನೀಡುತ್ತಿರುವ ಶಿಕ್ಷಣ ಯಾವುದಕ್ಕೆ ಬೇಕಾಗಿ ಎಂಬುದೇ ಗೊತ್ತಾಗುತ್ತಿಲ್ಲ. ಕೃಷಿ ಶಿಕ್ಷಣದ ಭಾಗವಾಗಬೇಕು ಮಕ್ಕಳು ಕೃಷಿಯನ್ನು ಪ್ರೀತಿಸುವಂತಾಗಬೇಕು, ಅದು ಸಾಧ್ಯವಾಗಬೇಕಾದರೆ ಕೃಷಿಕ ಆತ್ಮಾಭಿಮಾನದಿಂದ ಬದುಕುವಂತಾಗಬೇಕು.