ಉಜಿರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆ: ಮಂಗನಕಾಯಿಲೆ ಭೀತಿ?
ಮಂಗಳೂರು, ಜ.11: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿರುವುದರಿಂದ ಇದು ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಾಲ್ಕು ಐದು ದಿನಗಳ ಹಿಂದೆ ಸತ್ತಿರಬಹುದೆಂದು ಶಂಕಿಸಲಾದ ಮಂಗನ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಶವವನ್ನು ಪ್ರಯೋಗಲಾಯಕ್ಕೆ ಕಳುಹಿಸಲು ಅಸಾಧ್ಯವಾದ ಸ್ಥಿತಿಯಲ್ಲಿದ್ದ ಕಾರಣ ಅದನ್ನು ಸುಟ್ಟು ಹಾಕಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಮಂಗ ಸಾವನ್ನಪ್ಪಿದ್ದು ಹೇಗೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ಮಂಗನ ಶವ ಪ್ರಯೋಗಾಲಯಕ್ಕೂ ಕಳುಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮಂಗನಕಾಯಿಲೆಯ ಭೀತಿ ಇರುವುದರಿಂದ ಮಂಗನ ಶವ ಸಿಕ್ಕಿರುವ ಭಾಗದಲ್ಲಿ ಕೀಟನಾಶಕ ಸಿಂಪಡಿಸಲಾಗಿದ್ದು, ಸೂಕ್ತ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ ಎಂದರು.
Next Story