ಪೌರತ್ವ ತಿದ್ದ್ದುಪಡಿ ವಿಧೇಯಕದ ವಿವಾದ
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಭಾರತ ಇಂತಹ ಕೆಟ್ಟ ಜನವಿಭಜಕ ಕೇಂದ್ರ ಸರಕಾರವನ್ನು ನೋಡಿರಲಿಲ್ಲ. ಸಂವಿಧಾನದ ಆಶಯಗಳನ್ನು ಹೊಸಕಿ ಹಾಕುತ್ತ, ಜನತಂತ್ರದ ಬೇರುಗಳನ್ನು ಕತ್ತರಿಸಿ ಹಾಕುತ್ತ ಹೊರಟಿರುವ ಈ ಸರಕಾರ ಕಳೆದ ನಾಲ್ಕೂವರೆ ವರ್ಷಗಳ ಕಾಲಾವಧಿಯಲ್ಲಿ, ಜನಸಾಮಾನ್ಯರ ಪ್ರಾಣಹಿಂಡಿದಷ್ಟು ಹಿಂದಿನ ಇನ್ಯಾವ ಸರಕಾರವೂ ಹಿಂಡಿಲ್ಲ.
ಆರ್ಥಿಕ ವ್ಯವಸ್ಥೆಯ ಸೂಕ್ಷ್ಮಗಳನ್ನು ಅರಿಯದೆ ತಂದ ನೋಟು ಅಮಾನ್ಯೀಕರಣ, ಎಲ್ಲದಕ್ಕೂ ಆಧಾರ್ ಜೋಡಿಸುವ ಮೂರ್ಖ ನಿರ್ಧಾರ, ಜಿಎಸ್ಟಿ ಇಂತಹ ದುಡುಕಿನ ತೀರ್ಮಾನಗಳು ಭಾರತೀಯರನ್ನು ಸಂಕಷ್ಟಕ್ಕೀಡುಮಾಡಿದವು. ಜೊತೆಗೆ ದನರಕ್ಷಕರೆಂಬ ನರಹಂತಕರಿಗೆ ಸರಕಾರದ ಪ್ರಚೋದನೆಯೂ ಮಿತಿ ಮೀರಿತು. ಇದೂ ಸಾಲದೆಂಬಂತೆ ಅಧಿಕಾರಾವಧಿ ಮುಗಿಯಲು ಐದು ತಿಂಗಳಿರುವಾಗ ಪೌರತ್ವ ತಿದ್ದುಪಡಿ ವಿಧೇಯಕವನ್ನು ತರುವ ದುಸ್ಸಾಹಸಕ್ಕೆ ಈ ಸರಕಾರ ಕೈ ಹಾಕಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಿಂದ ದೇಶದೊಳಗೆ ಬಂದಿರುವ ಹಿಂದೂ ಅಕ್ರಮ ವಲಸಿಗರಿಗೆ ಭಾರತದಲ್ಲಿ ಪೌರತ್ವ ಕೊಡುವುದಾಗಿ ಬಿಜೆಪಿ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಭರವಸೆಯನ್ನು ಈಡೇರಿಸಲು ಪೌರತ್ವ ತಿದ್ದುಪಡಿ ವಿಧೇಯಕವನ್ನು ಮಂಡಿಸಿದೆ. ಇದು ಬಿಜೆಪಿಯ ಚುನಾವಣಾ ಉದ್ದೇಶದ ಕೋಮುವಾದಿ ಅಜೆಂಡಾದ ಒಂದು ಭಾಗ. ಪ್ರಸ್ತುತ ಮಂಡಿಸಲಾಗಿರುವ ವಿಧೇಯಕದಲ್ಲಿ ಹಿಂದೂ ಅಕ್ರಮ ವಲಸಿಗರು ಎಂದು ನೇರವಾಗಿ ಹೇಳಿಲ್ಲ, ಆದರೆ 2014ಕ್ಕಿಂತ ಮೊದಲು ಭಾರತವನ್ನು ಪ್ರವೇಶಿಸಿರುವ ಇಸ್ಲಾಂ ಹೊರತುಪಡಿಸಿ ಉಳಿದೆಲ್ಲ ಧರ್ಮೀಯರಿಗೆ ಭಾರತೀಯ ನಾಗರಿಕತ್ವ ಕೊಡುವ ಉದ್ದೇಶವಿದೆ. ಇದಕ್ಕೆ ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಸ್ಸಾಂನಲ್ಲಿ ಸರಕಾರ ರಚಿಸಲು ಬಿಜೆಪಿಗೆ ನೆರವಾದ ಅಸ್ಸಾಂ ಗಣ ಪರಿಷತ್ ಕೂಡ ಇದನ್ನು ವಿರೋಧಿಸಿದೆ,
ಅಕ್ರಮ ವಲಸಿಗರನ್ನು ಧರ್ಮಾಧರಿತವಾಗಿ ನೋಡುವುದೇ ತಪ್ಪು. ಒಂದು ಸಾರ್ವಭೌಮ ರಾಷ್ಟ್ರವಾಗಿ ಭಾರತ ಇಂಥ ವಿಭಜನೆ ಮಾಡಬಾರದು. ಕಳೆದ ಮೂರು ದಶಕಗಳಿಂದ ಅಕ್ರಮ ವಲಸೆಯ ಪ್ರಶ್ನೆಯನ್ನೆತ್ತಿಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ ಈಗ ಮಾತಾಡುತ್ತಿರುವ ರೀತಿ, ತಂದಿರುವ ವಿಧೇಯಕ ಅದು ತಲುಪಿದ ಅಧೋಃಗತಿಗೆ ಸಾಕ್ಷಿಯಾಗಿದೆ. ಮಿತ್ರ ಪಕ್ಷವಾದ ಅಸ್ಸಾಂ ಗಣಪರಿಷತ್ ವಿರೋಧದ ನಡುವೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ರಾಜ್ಯಸಭೆಯ ಒಪ್ಪಿಗೆ ದೊರೆತರೆ ಇದು ಜಾರಿಗೆ ಬರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ನಮ್ಮ ಪ್ರಧಾನಮಂತ್ರಿಗೆ ತಾನೇನು ಮಾತಾಡುತ್ತಿದ್ದೇನೆಂಬ ಅರಿವಿದ್ದಂತಿಲ್ಲ. ಆರೆಸ್ಸೆಸ್ ಶಾಖೆಯಲ್ಲಿ ಕಲಿತ ದ್ವೇಷದ ಪಾಠಗಳನ್ನು ಬಿಟ್ಟರೆ ಬೇರೆ ಗೊತ್ತಿಲ್ಲ. ಹಿಂದಿನ ಪ್ರಧಾನಿ ವಾಜಪೇಯಿಯವರಿಗಿದ್ದ ಅಧ್ಯಯನಶೀಲತೆ, ಸಂವಿಧಾನದ ಕುರಿತ ಗೌರವವಿಲ್ಲ. ಅಂತಲೇ ಇವರು ಮನ ಬಂದಂತೆ ಮಾತಾಡುತ್ತಾರೆ. ಕೇರಳಕ್ಕೆ ಹೋಗಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಮಾತಾಡಿದ್ದಾರೆ. ಇಂತಹವರಿಗೆ ಅಸ್ಸಾಂ ವಲಸಿಗರ ಸಮಸ್ಯೆಯ ಬಗ್ಗೆ ನಿರ್ವಿಕಾರವಾಗಿ ಯೋಚಿಸುವ ವಿವೇಚನೆ ಇರುತ್ತದೆಯೇ?
ಪೌರತ್ವ ತಿದ್ದಪಡಿ ವಿಧೆಯಕದ ಬಗ್ಗೆ ಹೇಳಬೇಕೆಂದರೆ ಭಾರತ ಎಂಬ ಪರಿಕಲ್ಪನೆಗೆ ಇದು ವಿರುದ್ದವಾಗಿದೆ. ಪೌರತ್ವ ನಿರ್ಧಾರಕ್ಕೆ ಧರ್ಮವನ್ನು ಮಾನದಂಡವಾಗಿ ಪರಿಗಣಿಸುವುದು ಅತ್ಯಂತ ಅಪಾಯಕಾರಿ. ಸಂವಿಧಾನದ ಆಶಯಗಳಿಗೆ ಇದು ವಿರುದ್ಧವಾಗಿದೆ. ಅಕ್ರಮ ವಲಸೆ ತಡೆಯ ಹೆಸರಿನಲ್ಲಿ ಈಶಾನ್ಯ ರಾಜ್ಯಗಳಲ್ಲೇ ಹುಟ್ಟಿಬೆಳೆದವರು ಅವರು ಹಿಂದೂಗಳಲ್ಲವಾದರೆ ಅವರಿಗೆ ಪೌರತ್ವ ನೀಡುವುದಿಲ್ಲ ಅಂದರೆ ಅದರ ಅರ್ಥವೇನು? ತನ್ನ ಪ್ರಜೆಗಳಲ್ಲೇ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಈ ವಿಧೇಯಕ ಸಮರ್ಥನೀಯವಲ್ಲ. ಇದರ ವಿರುದ್ಧ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದೆ. ಇಂಥ ವಿಧೇಯಕ ಬಿಜೆಪಿಯ ಹಿಂದೂ ಓಟ್ ಬ್ಯಾಂಕ್ ಬಲವರ್ಧನೆಗೆ ನೆರವಾಗಬಹುದು. ಆದರೆ ಅದನ್ನು ದೂರದೃಷ್ಟಿಯಿಂದ ಯೋಚಿಸಿದರೆ ಭಾರತದ ಐಕ್ಯತೆ ಸಮಗ್ರತೆಗೆಗಂಡಾಂತರಕಾರಿಯಾಗಿದೆ.
ಓಟ್ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜದ ಮೇಲ್ಜಾತಿಗಳಿಗೆ ಶೆ. 10ರ ಮೀಸಲು ಸೌಕರ್ಯ ಕೊಡುವುದು ಖಂಡನೀಯವಾಗಿದೆ. ವಿವಾದಾಸ್ಪದ ಕ್ರಮಗಳನ್ನು ಕೈಗೊಳ್ಳುವಲ್ಲಿ ಮೋದಿ ಸರಕಾರವನ್ನು ಮೀರಿಸಿದವರಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರದ ಬಿಜೆಪಿ ಸರಕಾರ ಭಿನ್ನದನಿಯನ್ನೇ ಹತ್ತಿಕ್ಕುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ದಿಲ್ಲಿಯ ಜವಹಾರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ನಾಶ ಮಾಡಲು ಮುಂದಾಗಿರುವ ಈ ಸರಕಾರ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಮೇಲೆ ರಾಜದ್ರೋಹದ ಆರೋಪ ಹೊರಿಸಿದೆ. ಮೂರು ವರ್ಷಗಳ ಹಿಂದೆ ಇತ್ಯರ್ಥವಾದ ಪ್ರಕರಣವನ್ನು ಮತ್ತೆ ಆರೋಪಪಟ್ಟಿ ಸಲ್ಲಿಸುವ ಅಗತ್ಯವೇನಿತ್ತು? ಕನ್ಹಯ್ಯಿ ಕುಮಾರ್ ಈ ಬಾರಿ ಬಿಹಾರದಿಂದ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಅದರ ಸಿದ್ಧತೆಯಲ್ಲಿ ತೊಡಗಿರುವಾಗ ಅವರ ಮೇಲೆ ರಾಜದ್ರೋಹದ ಆರೋಪ ಹೊರಿಸುವುದು ಸೇಡಿನ ಕ್ರಮವಲ್ಲದೆ ಬೇರೇನೂ ಅಲ್ಲ.
ಹೀಗೆ ಮೋದಿ ಸರಕಾರ ಹೊರಟ ದಾರಿ ಫ್ಯಾಶಿಸ್ಟ್ ಸರ್ವಾಧಿಕಾರದ ದಾರಿಯಾಗಿದೆ. ಇದಕ್ಕೆ ಜನರೇ ಮುಂದೆ ಉತ್ತರ ಕೊಡಲಿದ್ದಾರೆ. ಇತ್ತೀಚಿನ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ.