ಗಾಯಾಳು ಮಾರ್ಟಿನ್ಗೆ ಸೌರವ್ ಗಂಗುಲಿ ಅಭಯಹಸ್ತ
ಹೊಸದಿಲ್ಲಿ, ಜ.21: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೌರವ್ ಗಂಗುಲಿ ಅವರು ಮಾನವೀಯತೆಗಾಗಿ ಮಿಡಿದಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬರೋಡ ಕ್ರಿಕೆಟ್ ಲೆಜೆಂಡ್ ಜಾಕೋಬ್ ಮಾರ್ಟಿನ್ ಡಿಸೆಂಬರ್ 28ರಂದು ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ವೆಚ್ಚ ಭರಿಸಲು ಪರದಾಡುತ್ತಿದ್ದಾರೆ.
ಮಾರ್ಟಿನ್ ಅವರ ಲಿವರ್ ಹಾಗೂ ಶ್ವಾಸಕೋಶಗಳಿಗೆ ಭಾರೀ ಹಾನಿಯಾಗಿದ್ದು, ಅವರನ್ನು ಸದ್ಯ ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಮಾರ್ಟಿನ್ ಅವರ ಪತ್ನಿ ಈ ಕುರಿತು ಬಿಸಿಸಿಐನ ನೆರವು ಕೇಳಿದ್ದು, ಸುಮಾರು 5 ಲಕ್ಷ ರೂ. ವನ್ನು ಬಿಸಿಸಿಐ ಅವರ ಚಿಕಿತ್ಸೆಗೆ ಬಿಡುಗಡೆ ಮಾಡಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ದಿನವೊಂದಕ್ಕೆ ಚಿಕಿತ್ಸಾ ವೆಚ್ಚ ಅಂದಾಜು 70,000 ಎಂದು ಹೇಳಲಾಗಿದೆ. ಟೀಮ್ ಇಂಡಿಯಾ ದಂತಕತೆ ಸೌರವ್ ಗಂಗುಲಿ ಮಾರ್ಟಿನ್ರಿಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.
‘‘ಮಾರ್ಟಿನ್ ಮತ್ತು ನಾನು ಸಹ ಆಟಗಾರರು. ನನಗೆ ನೆನಪಿದ್ದಂತೆ ಅವರು ಶಾಂತ ಹಾಗೂ ಅಂತರ್ಮುಖಿ ಸ್ವಭಾವದವರು. ಮಾರ್ಟಿನ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಾ, ಅವರು ಒಬ್ಬಂಟಿಯಲ್ಲ ಅವರೊಂದಿಗೆ ನಾವಿದ್ದೇವೆ ಎಂದು ಅವರ ಕುಟುಂಬಕ್ಕೆ ಹೇಳಬಯಸುತ್ತೇನೆ’’ ಎಂದು ಗಂಗುಲಿ ಹೇಳಿದ್ದಾಗಿ ಟೆಲಿಗ್ರಾಫ್ ವರದಿ ಮಾಡಿದೆ.