ಭಟ್ಕಳ: ಜಿಎಸ್ಬಿ ಸಮಿತಿಯ 22ನೇ ವಾರ್ಷಿಕೋತ್ಸವ ಸಮಾರಂಭ
ಭಟ್ಕಳ, ಜ. 22: ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ 22ನೇ ವಾರ್ಷಿಕೋತ್ಸವವು ನಗರದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾದ ಮಂಗಳೂರಿನ ಕೋಡಿಯಾಲ್ ಖಬರ್ ಕೊಂಕಣಿ ಪಾಕ್ಷಿದ ಪ್ರಧಾನ ಸಂಪಾದಕ ವೆಂಕಟೇಶ ಬಾಳಿಗಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಭಟ್ಕಳ ಜಿ.ಎಸ್.ಎಸ್. ಸಂಸ್ಥೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿ, ನಾವೆಲ್ಲರೂ ಭಾಷಾಭಿಮಾನವನ್ನು ಬೆಳೆಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಅತಿಥಿ ನಿನಾದ ಸಂಸ್ಥೆ ಗಂಗೊಳ್ಳಿಯ ಅಧ್ಯಕ್ಷ ಮುಕುಂದ ಪೈ ಮಾತನಾಡಿ ಯುವ ಸಮುದಾಯಕ್ಕೆ ಭೌದ್ಧಿಕ ವಿಚಾರ ಭರಿತ ಶಿಕ್ಷಣವನ್ನು ನೀಡ ಬೇಕಾಗಿರುವುದು ಇಂದಿ ಅವಶ್ಯಕತೆ ಎಂದರು.
ಭಟ್ಕಳ ಜಿ.ಎಸ್.ಬಿ ಸಮಾಜದ ಪ್ರಥಮ ಮಹಿಳಾ ಲೆಕ್ಕ ಪರಿಶೋಧಕಿ (ಸಿ.ಎ) ಕುಮಾರಿ ಧನಶ್ರೀ ಪ್ರಭು, ಭಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಭಟ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲ್ಯೂ ನಿಖಿಲ್ ಶಾನಭಾಗ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಸಮಾಜದ ಗೌರವಾಧ್ಯಕ್ಷ ನರೇಂದ್ರ ನಾಯಕ, ಸುಬ್ರಾಯ ಕಾಮತ, ಜಿ.ಎಸ್.ಎಸ್ ಅಧ್ಯಕ್ಷ ಕಿರಣ ಶಾನಭಾಗ, ಮಹಿಳಾ ಸಮಿತಿ ಅಧ್ಯಕ್ಷೆ ನೀತಾ ಕಾಮತ, ಉದ್ಯಮಿ ನಾರಾಯಣ ಶಾನಭಾಗ, ನಾಗೇಶ ಪೈ ಮುಂತಾದವರು ಉಪಸ್ಥಿತರಿದ್ದರು.
ಗುರುದಾಸ್ ಪ್ರಭು ಹಾಗೂ ಶ್ರೀಮತಿ ಪಲ್ಲವಿ ಸತ್ಯೇಂದ್ರ ನಾಯಕ್ ನಿರೂಪಿಸಿದರು, ಅನಿಲ ಪೈ ಸ್ವಾಗತಿಸಿದರು, ಉಪಾಧ್ಯಕ್ಷ ಗಿರಿಧರ ನಾಯಕ ವಂದಿಸಿದರು.