ಭಟ್ಕಳ: ಝೇಂಕಾರ ಸಂಸ್ಥೆಯಿಂದ ಸಂಗೀತ, ನೃತ್ಯ ಕಾರ್ಯಾಗಾರ
ಭಟ್ಕಳ, ಜ. 22: ಸಂಗೀತ ಮತ್ತು ನೃತ್ಯ ಕಲಿಕಾ ಕಾರ್ಯಾಗಾರಗಳು ಮಕ್ಕಳಲ್ಲಿ ಲಲಿತ ಕಲೆಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಶಿರಲಿಯ ಸಮಾಜ ಸೇವಕ ವೈದ್ಯ ಆರ್.ವಿ.ಸರಾಫ್ ಹೇಳಿದರು.
ಅವರು ಭಟ್ಕಳದ ಝೇಂಕಾರ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಆಶ್ರಯದಲ್ಲಿ ಶ್ರೀ ವಡೇರ ಮಠದ ಸಭಾಗೃಹ ದಲ್ಲಿ ಆಯೋಜಿಸಲಾಗಿದ್ದ ಸಂಗೀತ ಮತ್ತು ನೃತ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಉಮೇಶ ಮುಂಡಳ್ಳಿ ಇವರು ಗುರುಕುಲ ಪದ್ಧತಿಯಲ್ಲಿ ಲಲಿತ ಕಲೆಗಳನ್ನು ಬೆಳೆಸಲು ಪ್ರಯತ್ನಿಸ ಬೇಕು ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಮನೋವಿಕಾಸಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ಶಿವಾನಂದ ದೈಮನೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಗಿರಿಜಾ ದೇವಡಿಗ, ಸಂಗೀತ ಶಿಕ್ಷಕ ವೆಂಕಟೇಶ ಭಟ್ಟ ಮುಂತಾದವರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿದರು. ಸಭೆಯ ನಂತರ ವಿಧ್ವಾನ್ ಅಶೋಕ ಕುಮಾರ ಹೆಗ್ಗೋಡು ಇವರಿಂದ ಸಂಗೀತ ಕಾರ್ಯಾಗಾರ ಹಾಗೂ ನೃತ್ಯ ವಿಧೂಷಿ ಪ್ರವಿತಾ ಅಶೋಕ ಮತ್ತು ಶಿಷ್ಯರಿಂದ ನೃತ್ಯ ಕಾರ್ಯಾಗಾರ ಅತ್ಯುತ್ತಮವಾಗಿ ಜರುಗಿತು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು.