ಲಾರಿ-ಕಾರು ಮುಖಾಮುಖಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು
ಮಡಿಕೇರಿ, ಫೆ.15: ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರಗುಂದ ಗ್ರಾಮದಲ್ಲಿ ನಡೆದಿದೆ.
ಮೂಲತಃ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ನಿವಾಸಿ ಅಚ್ಚೇಯಂಡ ಅರುಣ(44) ಮೃತ ವ್ಯಕ್ತಿ. ಕಾರಿನಲ್ಲಿದ್ದ ಇತರ 4 ಮಂದಿಯ ಪೈಕಿ 3 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಚಲಾಯಿಸುತ್ತಿದ್ದ ಅರುಣ ಚೇರಂಬಾಣೆಯ ತಮ್ಮ ಮಾವನ ತೋಟದಿಂದ ಕಾರ್ಮಿಕರನ್ನು ಕಾರಿನಲ್ಲಿ ಕರೆದುಕೊಂಡು ಊರಿನ ಕಡೆ ಹೊರಟಿದ್ದರು. ಮಡಿಕೇರಿ ಕಡೆಯಿಂದ ಭಾಗಮಂಡಲದ ಜೇನು ಸೊಸೈಟಿಗೆ ಜೇನು ತರುತ್ತಿದ್ದ ಲಾರಿ ಮತ್ತು ಕಾರಿನ ನಡುವೆ ಕಾರುಗುಂದ ಸಮೀಪದ ಅಯ್ಯಪ್ಪ ದೇವಸ್ಥಾನದ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಅರುಣ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಕಾರ್ಮಿಕರಾದ ಮಂಜು, ಕವಿತ ಮತ್ತು ಮಮತ ಎಂಬವರಿಗೆ ಗಾಯಗಳಾಗಿದ್ದು, ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿದ್ದ ರಮೇಶ ಎಂಬವರು ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ.
ಮಾಹಿತಿ ಅರಿತ ನಾಪೋಕ್ಲು ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.