ಯೋಧನ ಅಂತ್ಯಸಂಸ್ಕಾರಕ್ಕೆ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ: ಮುಗಿಲು ಮುಟ್ಟಿದ ಕುಟುಂಬದವರ ರೋಧನ
ಮಂಡ್ಯ, ಫೆ.15: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಸಿಆರ್ಪಿಎಫ್ ಯೋಧ ಎಚ್.ಗುರು(33) ಅವರ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.
ಹುತಾತ್ಮರಾದ ಯೋಧ ಎಚ್.ಗುರು ಅವರ ಪಾರ್ಥೀವ ಶರೀರದ ಆಗಮನದ ಕುರಿತು ಮಂಡ್ಯ ಜಿಲ್ಲಾಡಳಿತ ಸಿಆರ್ಪಿಎಫ್ ಕಚೇರಿಯೊಂದಿಗೆ ನೇರ ಸಂಪರ್ಕ ಹೊಂದಿದ್ದು, ವೀರ ಯೋಧನ ಅಂತ್ಯಸಂಸ್ಕಾರವನ್ನು ಎಲ್ಲಾ ಸರಕಾರಿ ಗೌರವದೊಂದಿಗೆ ನೆರವೇರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದ ಜಿಲ್ಲೆಯ ಮದ್ದೂರು ತಾಲೂಕು ಗುಡಿಗೆರೆ ಕಾಲನಿಯ ಸಿಆರ್ಪಿಎಫ್ ಯೋಧ ಎಚ್.ಗುರು ಕಳೆದ 9 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಗುರು ಒಂದು ವಾರದ ಹಿಂದೆ ರಜೆಯನ್ನು ಮುಗಿಸಿ ಸಂತೋಷದಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರು 2011ರಲ್ಲಿ ಸೇನಾಪಡೆಗೆ ಸೇರ್ಪಡೆಯಾಗಿದ್ದರು.
ಗುಡಿಗೆರೆ ಕಾಲನಿಯಲ್ಲಿ ಶ್ರಮಿಕ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿದೆ. ಬಡತನದಿಂದ ಬಂದಿದ್ದ ಗುರು, ಸಹೋದರರಿಗೆ ಉತ್ತಮ ಭವಿಷ್ಯ ರೂಪಿಸಲು ಸಿಆರ್ಪಿಎಫ್ ಸೇರಿದ್ದರು. ಹೊನ್ನಯ್ಯ, ಚಿಕ್ಕೋಳಮ್ಮ ಅವರ ಮೊದಲ ಪುತ್ರನಾದ ಗುರು ಅವರಿಗೆ ಮಧು ಹಾಗೂ ಆನಂದ್ ಎಂಬ ಇಬ್ಬರು ಸಹೋದರರಿದ್ದಾರೆ. ಒಂಭತ್ತು ತಿಂಗಳ ಹಿಂದೆ ಕನಕಪುರ ತಾಲೂಕಿನ ಸಾಸಲಪುರ ಗ್ರಾಮದ ಕಲಾವತಿಯನ್ನು ವಿವಾಹವಾಗಿದ್ದರು.
ರಜೆ ಮೇಲೆ ಒಂದು ವಾರ ಊರಿನಲ್ಲಿದ್ದ ಗುರು, ಕಳೆದ ರವಿವಾರ ಕರ್ತವ್ಯಕ್ಕೆ ತೆರಳಿದ್ದರು. ಕುಟುಂದವರ ಜತೆ ಪ್ರೀತಿಯ ಮಾತುಗಳನ್ನಾಡಿ ಕಾಶ್ಮೀರಕ್ಕೆ ತೆರಳಿದ್ದ ಗುರು ಇನ್ನು ನೆನಪು ಮಾತ್ರ. ಭಯೋತ್ಪಾದಕರ ಹೇಯ ಕೃತ್ಯಕ್ಕೆ ವೀರಯೋಧ ಗುರು ಹುತಾತ್ಮರಾಗಿದ್ದಾರೆ. ವೀರ ಯೋಧನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಮನೆ ಬಳಿ ಜಮಾಯಿಸಿದ ನೂರಾರು ಸಂಬಂಧಿಕರು, ಗ್ರಾಮಸ್ಥರು ಹಾಗೂ ಸ್ನೇಹಿತರು ಕಂಬನಿ ಮಿಡಿದ್ದಾರೆ. ಕುಟುಂದವರ ರೋಧನ ಮುಗಿಲು ಮುಟ್ಟಿದೆ.
ಪುಲ್ವಾಮದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ ಜಿಲ್ಲೆಯ ವೀರ ಯೋಧ ಗುರು ಅವರಿಗೆ ತಂಗಿ (ಚಿಕ್ಕಮ್ಮನ ಮಗಳು) ಎಂದರೆ ಪ್ರಾಣ. ಕರ್ತವ್ಯಕ್ಕೆ ಮರಳುವ ಮೊದಲು ತಂಗಿಯ ಹುಟ್ಟುಹಬ್ಬ ಆಚರಣೆ ಮಾಡಿ ನಂತರ ಕರ್ತವ್ಯಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.
ಪುಲ್ವಾಮಾ ದಾಳಿಯ ಹುತಾತ್ಮ ಯೋಧ ಗುರು ಗ್ರಾಮ ಗುಡಿಗೆರೆಗೆ ಶುಕ್ರವಾರ ಮದ್ದೂರು ತಹಶಿಲ್ದಾರ್ ಗೀತಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗುರು ಅವರ ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯಗೆ ಆತ್ಮಸ್ಥೈರ್ಯ ತುಂಬಿದರು.
ಗುರು ತಂದೆ ಹೊನ್ನಯ್ಯ ಜೊತೆ ಮಾತನಾಡಿದ ತಹಶಿಲ್ದಾರ್ ಗೀತಾ, ನಿಮ್ಮ ಮಗನ ಸಾವು ದೊಡ್ಡದು. ಅವರು ದೇಶಕ್ಕಾಗಿ ಮಡಿದಿದ್ದಾರೆ. ಹೆಮ್ಮೆ ಇರಲಿ ಎಂದು ಸಮಾಧಾನ ಮಾಡಿದರು. ಶೀಘ್ರವೇ ಪಾರ್ಥಿವ ಶರೀರ ತರಿಸುವ ಭರವಸೆ ನೀಡಿ, ಧೈರ್ಯದಿಂದ ಇರುವಂತೆ ಹೇಳಿದರು.
ಸಂಸ್ಕಾರಕ್ಕೆ ಸ್ಥಳ ನೀಡುವ ಭರವಸೆ: ತಹಶಿಲ್ದಾರ್ ಸಮಾಧಾನ ಮಾಡುತ್ತಿದ್ದಾಗ ಗ್ರಾಮಸ್ಥರು, ಸಂಸ್ಕಾರಕ್ಕೆ ಜಾಗವಿಲ್ಲ, ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ತಹಶಿಲ್ದಾರ್ ಸ್ಥಳ ಗುರುತಿಸುವುದಾಗಿ ಭರವಸೆ ನೀಡಿದರು.
ಸರಕಾರಿ ಜಾಗದಲ್ಲೇ ಅಂತ್ಯಕ್ರಿಯೆ:ಎನ್.ಮಂಜುಶ್ರೀ
ಗುಡಿಗೆರೆ ಸರ್ವೇ ನಂಬರ್ 54ರ ಸರಕಾರಿ ಜಾಗದಲ್ಲಿ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೇಳಿದ್ದಾರೆ.
ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ ಅವರು, ಅಂತ್ಯಸಂಸ್ಕಾರಕ್ಕೂ ಮುನ್ನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ನಾಳೆ ಪಾರ್ಥಿವ ಶರೀರ ಆಗಮನದ ನಿರೀಕ್ಷೆ ಇದೆ ಎಂದರು.