ಹನೂರು: ವಿದ್ಯುತ್ ಸಮಸ್ಯೆಯಿಂದ ನೀರಿಗಾಗಿ ಪರದಾಟ; ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ
ಹನೂರು,ಫೆ.15: ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು. ಗ್ರಾಮದಲ್ಲಿ ಸಕಾಲಕ್ಕೆ ವಿದ್ಯುತ್ ಬಾರದಿದ್ದರೆ ಗ್ರಾಮಸ್ಥರು ನೀರಿಗಾಗಿ ಪರದಾಡುವ ಅನಿವಾರ್ಯತೆ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಎಲ್ಲೆಮಾಳ ಗ್ರಾಪಂ ವ್ಯಾಪ್ತಿಗೆ ಸೇರಿದ ಚಿತ್ತಾಪುರ ಗ್ರಾಮದಲ್ಲಿ ಹೆಚ್ಚು ಕೂಲಿ ಕಾರ್ಮಿಕರು ವಾಸವಿದ್ದು, ಅದ್ದರಲ್ಲೂ ಅಲ್ಪಸಂಖ್ಯಾತ ಕುಂಟುಂಬಸ್ಥರು ಹೆಚ್ಚಿದ್ದಾರೆ. ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಳೆ ಆಡುತ್ತಿದ್ದು, ವಿದ್ಯುತ್ ಸಮಸ್ಯೆ ತಲೆದೋರಿದೆ. ಪ್ರತಿನಿತ್ಯ ಅಗತ್ಯ ಸಮಯದಲ್ಲಿ ವಿದ್ಯುತ್ ಬಾರದೇ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಾವು ಮನೆಯ ಕೆಲಸ ಬಿಟ್ಟು ನೀರಿಗಾಗಿ ಕಾಯುವುದೇ ಹೆಚ್ಚಾಗಿದೆ. ಅಲ್ಪ ನೀರು ಸಿಕ್ಕರೂ ಯಾವುದಕ್ಕೂ ಸಾಲುತ್ತಿಲ್ಲ ಎಂದು ಹಲವು ಮಹಿಳೆಯರು ಆಳಲು ತೋಡಿಕೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Next Story