ಅಪಾಯದ ಅರಿವಿದ್ದರೂ ಯೋಧರಿಗಾಗಿ ವಿಮಾನ ಬಳಸಿಲ್ಲ ಏಕೆ?: ಪುಲ್ವಾಮ ದಾಳಿಯ ಹಿಂದೆ ಹಲವು ಪ್ರಶ್ನೆಗಳು
ಹೊಸದಿಲ್ಲಿ, ಫೆ.16: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ ಎಸ್ಜಿ)ಯ ಭಯೋತ್ಪಾದಕ ವಿರೋಧಿ ಪಡೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಆರಂಭಿಸಿದೆ. ಉಭಯ ಏಜೆನ್ಸಿಗಳ ಉನ್ನತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಮಧ್ಯೆ ಗುಪ್ತಚರ ವಿಭಾಗ ಹಾಗೂ ಭದ್ರತಾ ಶಿಷ್ಟಾಚಾರದಲ್ಲಿ ಆಗಿರುವ ಲೋಪಗಳ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಜಮ್ಮು ಕಾಶ್ಮೀರದಲ್ಲಿ 3 ದಶಕಗಳಲ್ಲಿ ನಡೆದ ದಾಳಿಗಳಲ್ಲೇ ಇದು ಭೀಕರ ದಾಳಿ ಎನಿಸಿಕೊಂಡಿದೆ. ಈ ಘಟನೆ ನಡೆಯುವ ಎರಡು ದಿನಗಳ ಮುನ್ನ ಜೆಇಎಂ ಸಂಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಥಾನಿಸ್ತಾನ ಕಾರು ಬಾಂಬ್ ದಾಳಿಯ ವಿಡಿಯೊವನ್ನು ಅಪ್ ಲೋಡ್ ಮಾಡಿ, ಇಂಥದ್ದೇ ದಾಳಿಯನ್ನು ಕಾಶ್ಮೀರದಲ್ಲೂ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ತನಿಖಾ ವಿಭಾಗ ಈ ವಿಡಿಯೊ ಶೇರ್ ಮಾಡಿ ದಾಳಿಯ ಮುನ್ಸೂಚನೆ ನೀಡಿತ್ತು.
ಸಾಮಾನ್ಯವಾಗಿ ಸೈನಿಕರನ್ನು ಭದ್ರತೆ ದೃಷ್ಟಿಯಿಂದ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ. ಆದರೆ ಈ ಬಾರಿ 2,500 ಮಂದಿ ಸಿಆರ್ಪಿಎಫ್ ಪೊಲೀಸರನ್ನು 78 ವಾಹನಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಜಮ್ಮುವಿನಿಂದ ಮುಂಜಾನೆ 3.30ಕ್ಕೆ ಸೈನಿಕರು ಹೊರಟಿದ್ದರು. ಇದಕ್ಕೂ ಮುನ್ನ ಎರಡು ದಿನಗಳ ಕಾಲ ಪ್ರತಿಕೂಲ ಹವಾಮಾನದಿಂದಾಗಿ ಹೆದ್ದಾರಿ ಮುಚ್ಚಲಾಗಿತ್ತು.
ಮಧ್ಯಾಹ್ನ 3ರ ಸುಮಾರಿಗೆ ಈ ದಾಳಿ ನಡೆದಿತ್ತು. ಎಲ್ಲ ವಾಹನಗಳೂ ಜತೆಜತೆಗೇ ಸಾಗುತ್ತಿದ್ದವು ಎಂದಾದಲ್ಲಿ, ಇದು ನಿಗದಿತ ಕಾರ್ಯಾಚರಣೆ ವಿಧಿವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಾಸ್ತವವಾಗಿ ಎರಡು ವಾಹನಗಳ ನಡುವೆ ನಿಗದಿತ ಅಂತರವಿರಬೇಕು ಎನ್ನುವುದು ಅವರ ಅಭಿಪ್ರಾಯ.
ಈ ವಾಹನಗಳ ಓಡಾಟಕ್ಕಾಗಿ ಮುಂಜಾನೆ ಹೆದ್ದಾರಿಯನ್ನು ಸ್ವಚ್ಛಗೊಳಿಸಲಾಗಿತ್ತು. ಇಷ್ಟಾಗಿಯೂ ದಾಳಿಕೋರ ಹೆದ್ದಾರಿ ಪ್ರವೇಶಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈ ದಾಳಿಯ ಬಗ್ಗೆ ಹಲವು ತಿಂಗಳುಗಳ ಸಿದ್ಧತೆ ನಡೆದಿರಬೇಕು ಎಂದು ಮೂಲಗಳು ಶಂಕಿಸಿವೆ.