ತ್ರಿವರ್ಣ ಧ್ವಜ ಹಾರಿದ್ದಕ್ಕಿಂತ ಹೆಚ್ಚು ಅದನ್ನು ಶವಪೆಟ್ಟಿಗೆಗೆ ಹೊದಿಸಲಾಗಿದೆ: ಶಿವಸೇನೆ ಟೀಕೆ
ಮುಂಬೈ, ಫೆ.18: ಇತ್ತೀಚಿನ ದಿನಗಳಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಹೆಮ್ಮೆ, ಅಭಿಮಾನದಿಂದ ಮೇಲಕ್ಕೇರಿಸಿರುವುದಕ್ಕಿಂತಲೂ ಹೆಚ್ಚು ಬಾರಿ ಅದನ್ನು ಮೃತ ಯೋಧರ ಶವಪೆಟ್ಟಿಗೆಗೆ ಹೊದಿಸಲು ಬಳಸಲಾಗಿದೆ ಎಂದು ಶಿವಸೇನೆ ಸೋಮವಾರ ಹೇಳಿದೆ.
ಯುದ್ಧ ನಡೆಯುತ್ತಿಲ್ಲವಾದರೂ ನಮ್ಮ ಯೋಧರು ಸಾವಿಗೀಡಾಗಬೇಕಿರುವುದು ದುರದೃಷ್ಟಕರ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ. ಈಗ ಒಬ್ಬರ ಮೇಲೊಬ್ಬರು ದೋಷ ಹೊರಿಸುವುದನ್ನು ಬಿಟ್ಟು ಭದ್ರತಾ ಪಡೆಗಳ ಮತ್ತು ಮೃತಪಟ್ಟ ಯೋಧರ ಕುಟುಂಬದವರ ಬೆಂಬಲಕ್ಕೆ ನಿಲ್ಲಬೇಕಾದ ಅಗತ್ಯವಿದೆ ಎಂದು ಶಿವಸೇನೆ ಹೇಳಿದೆ.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದೇ ರೀತಿಯ ಘಟನೆ ಕಾಶ್ಮೀರದಲ್ಲಿ ನಡೆದಿತ್ತು. ಆಗ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ನಮ್ಮ ಯೋಧರು ದುರ್ಬಲರಲ್ಲ, ಆದರೆ ಕೇಂದ್ರದಲ್ಲಿರುವ ಸರಕಾರ ದುರ್ಬಲವಾಗಿದೆ ಎಂಬ ಹೇಳಿಕೆ ನೀಡಿದ್ದರು ಎಂದು ಶಿವಸೇನೆ ಕುಟುಕಿದೆ. ಈಗ ಎಲ್ಲರೂ ಕೇಂದ್ರ ತೆಗೆದುಕೊಳ್ಳಲಿರುವ ಪ್ರತೀಕಾರದ ಕ್ರಮವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
ತಪ್ಪುಗಳನ್ನು ಎತ್ತಿ ತೋರಿಸುವ ಸಮಯವಿದಲ್ಲ. ಸೇನೆಯೊಂದಿಗೆ ನಿಂತು ಅವರನ್ನು ಹುರಿದುಂಬಿಸುವ ಕೆಲಸ ಈಗ ಆಗಬೇಕಿದೆ ಎಂದು ಹೇಳಿರುವ ಶಿವಸೇನೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 1971ರಲ್ಲಿ ಯುದ್ಧ ಆರಂಭಿಸುವ ನಿರ್ಧಾರ ಕೈಗೊಂಡು ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದರು. ನಮ್ಮ ಯೋಧರು ಲಾಹೋರ್ ವರೆಗೂ ನುಗ್ಗಿದ್ದರು. ಲಕ್ಷಾಂತರ ಪಾಕ್ ಸೈನಿಕರು ಮೊಳಕಾಲೂರಿ ಶರಣಾಗಿದ್ದರು ಎಂದು ನೆನಪಿಸಿಕೊಂಡಿದೆ.