ವೇದಾಂತ ಸ್ಟರ್ಲೈಟ್ ಘಟಕ ಆರಂಭಕ್ಕೆ ಸುಪ್ರೀಂ ತಡೆ
ಹೊಸದಿಲ್ಲಿ, ಫೆ. 18: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಸ್ಟರ್ಲೈಟ್ ಘಟಕ ಮರು ಆರಂಭಿಸಲು ಅವಕಾಶ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಆದರೆ, ಹೈಕೋರ್ಟ್ ಸಂಪರ್ಕಿಸುವ ಸ್ವಾತಂತ್ರವನ್ನು ಅರ್ಜಿದಾರರಿಗೆ ನೀಡಿದೆ. ಸಮರ್ಥನೀಯತೆ ಆಧಾರದಲ್ಲಿ ಮಾತ್ರ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವುದಾಗಿ ನ್ಯಾಯಮೂರ್ತಿ ಆರ್.ಎಫ್ ನಾರಿಮನ್ ನೇತೃತ್ವದ ಪೀಠ ಹೇಳಿದೆ. ಘಟಕ ಮರು ಆರಂಭಿಸಲು ಆದೇಶ ನೀಡುವ ಅಧಿಕಾರ ವ್ಯಾಪ್ತಿಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಘಟಕವನ್ನು ಮುಚ್ಚುವ ತಮಿಳುನಾಡು ಸರಕಾರದ ನಿರ್ಧಾರವನ್ನು ಬದಿಗೆ ಸರಿಸಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನೀಡಿದ ನಿರ್ದೇಶನ ಅನುಷ್ಠಾನಗೊಳಿಸಲು ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವೇದಾಂತ ಗುಂಪು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಹೇಳಿದೆ. ಸ್ಟರ್ಲೈಟ್ ಘಟಕ ಮುಚ್ಚುವಂತೆ ಆಗ್ರಹಿಸಿ 2018 ಮೇಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ತಾಮ್ರ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದರು.