21 ಜೈಶ್ ಉಗ್ರರು ಭಾರತಕ್ಕೆ ನುಸುಳಿದ್ದು ಯಾವಾಗ ಗೊತ್ತೇ ?
ಪುಲ್ವಾಮ, ಫೆ. 19: ಭಾರತದ ಕಣಿವೆ ರಾಜ್ಯದಲ್ಲಿ ಒಂದು ಹಾಗೂ ಇತರೆಡೆಗಳಲ್ಲಿ ಎರಡು ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸುವ ಉದ್ದೇಶದಿಂದ ಮೂವರು ಆತ್ಮಹತ್ಯಾ ಬಾಂಬರ್ಗಳು ಸೇರಿದಂತೆ 21 ಮಂದಿ ಜೈಶ್ ಉಗ್ರರ ತಂಡ ಡಿಸೆಂಬರ್ ತಿಂಗಳಲ್ಲೇ ಭಾರತದ ಗಡಿಯೊಳಕ್ಕೆ ನುಸುಳಿದೆ ಎಂಬ ಸ್ಫೋಟಕ ಮಾಹಿತಿಯನ್ನು ಗುಪ್ತಚರ ವಿಭಾಗದ ಮೂಲಗಳು ಬಹಿರಂಗಪಡಿಸಿವೆ.
ಜೆಇಎಂ ಮುಖ್ಯಸ್ಥ ಮಸೂದ್ ಅಝರ್ನ ಅಳಿಯ ಮೊಹ್ಮದ್ ಉಮರ್ ನೇತೃತ್ವದಲ್ಲಿ, ಸೋಮವಾರ ಹತ್ಯೆಗೀಡಾದ ಕಮ್ರನ್ ಸೇರಿದಂತೆ 21 ಮಂದಿ ಭಾರತಕ್ಕೆ ನುಸುಳಿದ್ದರು. ಅಕ್ಟೋಬರ್ ತಿಂಗಳಲ್ಲಿ ಅಝರ್ನ ಮತ್ತೊಬ್ಬ ಅಳಿಯ ಉಸ್ಮಾನ್ ಹೈದರ್ನನ್ನು ಹತ್ಯೆ ಮಾಡಿದ್ದಕ್ಕೆ ಮತ್ತು 2001 ಸಂಸತ್ ದಾಳಿಯ ರೂವಾರಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸುವಂತೆ ಅವರಿಗೆ ಸೂಚಿಸಲಾಗಿತ್ತು ಎಂದು ಉನ್ನತ ಮೂಲಗಳು ಹೇಳಿವೆ.
ಫೆ. 5ರಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅಝರ್ನ ತಮ್ಮ ರವೂಫ್ ಅಝ್ಗರ್, "ಮೋದಿ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದಲ್ಲಿ ಭಾರತದಲ್ಲಿ ಆತ್ಮಹತ್ಯಾ ದಾಳಿ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದು ಪಾಕಿಸ್ತಾನದ ಕ್ಯಾಮೆರಾದಲ್ಲಿ ದಾಖಲಾಗಿದೆ.
ವಿಶೇಷ ತರಬೇತಿ ಪಡೆದ ಮತ್ತು ಶಸ್ತ್ರಸನ್ನದ್ಧವಾಗಿದ್ದ ಈ ವಿಶೇಷ ಪಡೆ ಎರಡು ಗುಂಪುಗಳಾಗಿ ವಿಂಗಡಣೆಯಾಗಬೇಕಿತ್ತು. ಮುದಸ್ಸರ್ ಖಾನ್ ಹಾಗೂ ಶಹೀದ್ ಬಾಬಾ ಎಂಬವವರು ಈ ಎರಡು ಪಡೆಗಳ ನೇತೃತ್ವ ವಹಿಸಿದ್ದರು ಎಂದು ಮೂಲಗಳು ವಿವರ ನೀಡಿವೆ. ಆದರೆ ಬಾಬಾ ಫೆ.1ರಂದು ಪುಲ್ವಾಮದ ಧ್ರುವಗಾಮ್ ಎಂಬಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದ.
ಸ್ಥಳೀಯ ಕಾಶ್ಮೀರಿ ಆದಿಲ್ ಅಹ್ಮದ್ ದಾರ್ನನ್ನು ಫೆ.14ರ ಬಾಂಬ್ ದಾಳಿಗೆ ಆಯ್ಕೆ ಮಾಡಲಾಗಿತ್ತು. ಇತರ ಇಬ್ಬರಿಗೆ ಜಮ್ಮು ಹಾಗೂ ಬೇರೆಡೆ ದಾಳಿ ನಡೆಸಲು ಜವಾಬ್ದಾರಿ ವಹಿಸಲಾಗಿತ್ತು. ಉರ್ದು ಭಾಷೆಯಲ್ಲಿ ಬರೆದ ಚೀಟಿಯನ್ನು ಆರಿಸುವ ಮೂಲಕ ಆತ್ಮಹತ್ಯಾ ಬಾಂಬರ್ಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಲಾಗಿದೆ.